ಉಡುಪಿ :ಮಹಿಳಾ ಪೇದೆ ಆತ್ಮಹತ್ಯೆಗೆ ಶರಣು.!

ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ನಿನ್ನೆ(ಮಾ.29) ರಾತ್ರಿ ಕಾಪು ಪೊಲೀಸ್ ಕ್ವಾರ್ಟರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜ್ಯೋತಿ ಮೃತ ರ್ದುದೈವಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2021 ಬ್ಯಾಚ್ನಲ್ಲಿ ಪಾಸ್ ಆಗಿ ಇಲಾಖೆಗೆ ಸೇರಿದವರು. ಜ್ಯೋತಿ ಅವರ ಪತಿ ರವಿಕುಮಾರ್, ಉಡುಪಿಯಲ್ಲಿ ಕೆಎಸ್ಆರ್ಟಿಸಿ ಮೆಕ್ಯಾನಿಕ್. ಜ್ಯೋತಿ ಮತ್ತು ರವಿಕುಮಾರ್ ಇಬ್ಬರದ್ದು 10 ವರ್ಷದ ಪ್ರೀತಿ. ಆರು ವರ್ಷದ ಹಿಂದೆ ಮದುವೆಯಾಗಿದ್ದರು. ಕಾಲೇಜು ಪ್ರೊಫೆಸರ್ ಆಗಿದ್ದ ರವಿಕುಮಾರ್, ಕೆಲ ತಿಂಗಳ ಹಿಂದೆ ಕೆ ಎಸ್ ಆರ್ ಟಿಸಿ ಡಿಪೋ ಅಸಿಸ್ಟೆಂಟ್ ಮೆಕ್ಯಾನಿಕ್ ಆಗಿ ಆಯ್ಕೆಯಾಗಿದ್ದಾರೆ.
ಗಂಡ-ಹೆಂಡತಿ ನಡುವೆ ಜಗಳ
ಇನ್ನು ಉಡುಪಿಯಲ್ಲೇ ಕೆಲಸಕ್ಕೆ ಸೇರಿ ಜೊತೆಗಿದ್ದರು. ಇತ್ತೀಚಿನ ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರದಲ್ಲಿ ಮನಸ್ತಾಪವಾಗಿತ್ತು. ಕಳೆದ ರಾತ್ರಿ ಇಬ್ಬರ ನಡುವೆ ದೊಡ್ಡ ಮಟ್ಟದಲ್ಲಿ ಜಗಳವಾಗಿತ್ತು ಎಂದು ಅಕ್ಕ-ಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತಿ ಮನೆಯ ಹಾಲ್ನಲ್ಲಿ ಮಲಗಿದ್ದು, ಪತ್ನಿ ಜ್ಯೋತಿ ತಾನಿದ್ದ ರೂಮ್ಗೆ ಚಿಲಕ ಹಾಕಿಕೊಂಡಿದ್ದರು. ಬೆಳಗ್ಗೆ ಬಾಗಿಲು ತೆಗೆಯದೆ ಇದ್ದದ್ದನ್ನು ಕಂಡು ಸಂಶಯಗೊಂಡು, ಪತಿ ಪರಿಶೀಲನೆ ಮಾಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದು ಉಡುಪಿ ಎಸ್ಪಿ ಡಾ. ಅರುಣ್, ಕಾಪು ತಹಶೀಲ್ದಾರ್ ಪ್ರತಿಭಾ, ಎಎಸ್ಪಿ ಸಿದ್ಧಲಿಂಗಪ್ಪ ಘಟನಾ ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ತನಿಖಾ ಪ್ರಕ್ರಿಯೆಗಳಿಗೆ ಸೂಚನೆ ನೀಡಿದ್ದು, ಈ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಯೋತಿ ಫೋನ್ ಬಳಕೆ ಮಾಡುವ ಕುರಿತಂತೆ ರವಿಕುಮಾರ್ ತಗಾದೆ ತೆಗೆಯುತ್ತಿದ್ದರು. ಅದೇ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಾಗಲಕೋಟೆಯಿಂದ ಜ್ಯೋತಿ ಕುಟುಂಬ ಕಾಪುವಿಗೆ ಹೊರಟಿದೆ. ಕುಟುಂಬದ ಸದಸ್ಯರು ಬಂದ ನಂತರ ಮೃತ ದೇಹದ ಮಹಜರು, ಮರಣೋತ್ತರ ಪ್ರಕ್ರಿಯೆ ನಡೆಯಲಿದೆ.
ಕಡಬ : ಅಕ್ರಮ ದನ ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು
ಪುತ್ತೂರು ಮಾರ್ಚ್ 30: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಕಡಬದ ಮರ್ಧಾಳ ಎಂಬಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಪಾದಚಾರಿ ಸಾವನಪ್ಪಿದ್ದಾರೆ. ಮೃತರನ್ನು ಮರ್ಧಾಳ ನಿವಾಸಿ ವಿಠಲ ರೈ ಎಂದು ಗುರುತಿಸಲಾಗಿದೆ. ಮರ್ದಾಳ ಪೇಟೆಯಲ್ಲಿ ವಿಠಲ ರೈ ಯವರು ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬಳಿಕ ಕಾರನ್ನು ಮರ್ಧಾಳದ ಮನೆಯೊಂದರ ಮುಂದೆ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಡಬ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸುತ್ತಿದ್ದು, ಪ್ರತಿಭಟನೆ ಜೋರಾಗುವ ಸಾಧ್ಯತೆ ಇದೆ.