ನ್ಯಾಯಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಯೋಗ ಗುರು ಬಾಬಾ ರಾಮದೇವ್ ಗೆ ಸುಪ್ರೀಂ ಕೋರ್ಟ್ ಸೂಚನೆ..!

ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ನೋಟಿಸ್ಗೆ ಪ್ರತಿಕ್ರಿಯಿಸಲು ವಿಫಲವಾದ ಪತಂಜಲಿ(Patanjali) ಆಯುರ್ವೇದ(Ayurveda) ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಕಂಪನಿಯ ಸಹ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮ್ದೇವ್(Baba Ramdev) ಅವರಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ತನ್ನ ಉತ್ಪನ್ನಗಳು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಸುಳ್ಳು ಅಂಶಗಳಿರುವ ಜಾಹೀರಾತು ನೀಡಬಾರದು ಎಂದು ಪತಂಜಲಿ ಆಯುರ್ವೇದ ಸಂಸ್ಥೆಗೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಪ್ರಾರಂಭಿಸಬಾರದು ಎಂದು ಕೇಳಿ ಪತಂಜಲಿಗೆ ನೋಟಿಸ್ ನೀಡಿತ್ತು.
ಏನಿದು ಪ್ರಕರಣ?
ಆಯುರ್ವೇದ ಹೆಸರಲ್ಲಿ ಜನರ ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿದೆ ಎಂಬ ದೂರಿನ ಮೇರೆಗೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಔಷಧಿಗಳ ಪ್ರಚಾರದ ಜಾಹೀರಾತುಗಳ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಮೂಲಕ ನಿರ್ಬಂಧ ಹೇರಿತ್ತು. ಎಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡದಂತೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ನ್ಯಾಯಪೀಠವು ಖಡಕ್ ನಿರ್ದೇಶನ ನೀಡಿತ್ತು.
ಪಂತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡುತ್ತಿರುವ ಪತಂಜಲಿ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರಕಾರದ ವಿರುದ್ಧವೂ ಈ ಸಂದರ್ಭದಲ್ಲಿ ಚಾಟಿ ಬೀಸಿತ್ತು.
ಪತಂಜಲಿ ಆಯುರ್ವೇದ ಔಷಧದಿಂದ ಯಾವುದೇ ಕಾಯಿಲೆ ಗುಣಮುಖವಾದ ಪೂರಕ ದಾಖಲೆ ಅಥವ ಸಾಕ್ಷ್ಯ ಇಲ್ಲದಿದ್ದರೂ, ಜನರನ್ನು ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿರುವುದಲ್ಲದೆ, ಆಲೋಪತಿ ವೈದ್ಯಕೀಯ ಪದ್ಧತಿ ಬಗ್ಗೆ ಸಂಸ್ಥೆಯು ಅಪಪ್ರಚಾರ ನಡೆಸುತ್ತಿದೆ. ಕೆಮಿಕಲ್ ಆಧಾರಿತ ಔಷಧಿಗಳಿಗಿಂತ ಪತಂಜಲಿ ಆಯುರ್ವೇದ ಔಷಧಿ ಶ್ರೇಷ್ಠ ಎಂಬಂತೆ ಬಿಂಬಿಸಲಾಗಿದೆ ಎಂದು ನ್ಯಾಯಾಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.
ಇಂಥ ಸುಳ್ಳು ಮಾಹಿತಿಯ ವೈದ್ಯಕೀಯ ಜಾಹೀರಾತುಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೂ ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು. ಕೋವಿಡ್-19 ನಿಯಂತ್ರಕ ಲಸಿಕೆ ವಿರುದ್ಧ ಸಂಸ್ಥೆಯು ಅಪಪ್ರಚಾರ ನಡೆಸಿದೆ ಎಂದು ಆರೋಪಿಸಿ ಐಎಂಎ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು.
ನ್ಯಾಯಾಂಗ ನಿಂದನೆ
ಮತ್ತೊಂದು ವೈದ್ಯಕೀಯ ಚಿಕಿತ್ಸಾ ಪದ್ದತಿ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಪತಂಜಲಿ ಔಷಧಿಗಳ ಪ್ರಚಾರ ಮಾಡುತ್ತಿರುವ ಪತಂಜಲಿ ಸಂಸ್ಥೆಗೆ ಕಳೆದ ವರ್ಷದ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದಲ್ಲದೆ, ಭವಿಷ್ಯದಲ್ಲಿ ಜನರನ್ನು ದಾರಿ ತಪ್ಪಿಸುವ ಜಾಹೀರಾತು ನೀಡಬಾರದು. ಹಾಗೂ ಅಲೋಪತಿ ವೈದ್ಯಕೀಯ ಚಿಕಿತ್ಸಾ ಪದ್ಧತಿ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ತಾಕೀತು ಮಾಡಿತ್ತು.
ಇಷ್ಟಲ್ಲದೆ ಕೋರ್ಟ್ ಆದೇಶ ಮೀರಿದರೆ ಒಂದು ಕೋಟಿ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನು ನ್ಯಾಯಮೂರ್ತಿ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಕೊಟ್ಟಿತ್ತು. ಹೀಗಿದ್ದೂ ಕೋರ್ಟ್ ಆದೇಶ ಮೀರಿದ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಹಾಗೂ ಸಿಇಒ ಬಾಲಾಕೃಷ್ಣಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದ ಸುಪ್ರೀಂ ಕೋರ್ಟ್, ಮೂರು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಖಡಕ್ ಸೂಚನೆ ನೀಡಿತ್ತು.