ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಕುಣಿಗಲ್ ಹಂಗರಹಳ್ಳಿ ಮಠದ ಸ್ವಾಮೀಜಿ ಬಂಧನ.!
ಪೋಕ್ಸೋ ಪ್ರಕರಣದಡಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷರಾಗಿರುವ ಬಾಲಮಂಜುನಾಥ್ ಸ್ವಾಮೀಜಿಯನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಬಾಲಮಂಜುನಾಥ್ ಸ್ವಾಮೀಜಿ ಹಾಗೂ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ಪೊಲೀಸರು, ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ತುಮಕೂರು ಎಸ್ಪಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ದೂರು ನೀಡಿದ್ದ ಸ್ವಾಮೀಜಿ: ಚರ್ಮರೋಗಕ್ಕೆ ಚಿಕಿತ್ಸೆ ನೀಡುವ ನೆಪದಲ್ಲಿ ತನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂಬ ಆರೋಪದ ಮೇಲೆ ಇತ್ತೀಚೆಗೆ ಬಾಲಮಂಜುನಾಥ್ ಸ್ವಾಮೀಜಿ ತಮ್ಮ ಆಪ್ತ ಸಹಾಯಕ ಅಭಿಷೇಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಸೇವಕ ಅಭಿಷೇಕ್ ಹಾಗೂ ತಂಡ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದೆ ಎಂದು ಒಟ್ಟು 6 ಜನರ ಮೇಲೆ ದೂರು ನೀಡಲಾಗಿತ್ತು. ಈ ಸಂಬಂಧ ಕಳೆದ ಫೆಬ್ರವರಿ 10ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ಬೆಳಕಿಗೆ ಬಂದಿದೆ.