ಕ್ರಿಕೆಟಿಗ ಶುಭ್ಮನ್ ಗಿಲ್ ಪಂಜಾಬ್ ರಾಜ್ಯ ಚುನಾವಣಾ ಐಕಾನ್ ಆಗಿ ನೇಮಕ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯ ಚುನಾವಣಾಧಿಕಾರಿ, ಕ್ರಿಕೆಟಿಗ ಶುಭ್ಮನ್ ಗಿಲ್ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಅದರಂತೆ ಗಿಲ್ ಪ್ರತ್ಯೇಕವಾಗಿ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಲಿದ್ದಾರೆ. ರಾಜ್ಯದಲ್ಲಿ ಮತದಾನದ ಪ್ರಮಾಣ ಶೇ 70ರ ಗಡಿ ದಾಟುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇಕಡಾ 65.96 ರಷ್ಟು ಮತದಾನವಾಗಿತ್ತು. ಈ ಬಾರಿಯ ಮತದಾನವನ್ನು ಶೇ.70ರಷ್ಟಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ‘ಈ ಬಾರಿ 70 ದಾಟಬೇಕು’ ಎಂಬ ಘೋಷವಾಕ್ಯದೊಂದಿಗೆ ಆಯೋಗ ಚುನಾವಣಾ ಪ್ರಚಾರ ನಡೆಸುತ್ತಿದೆ.
ಗಿಲ್ ಯುವ ಪ್ರತಿಭಾವಂತ ಕ್ರಿಕೆಟಿಗನಾಗಿದ್ದು, ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿಲಿದ್ದಾರೆ. ಇದು ಪ್ರತಿಯೊಬ್ಬರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತದೆ ಮತ್ತು ಮತದಾನದ ಶೇಕಡಾವಾರು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಿಂದೆ, ಜನಪ್ರಿಯ ಪಂಜಾಬಿ ಗಾಯಕ ತಾರ್ಸೆಮ್ ಜಸ್ಸರ್ ಅವರನ್ನು ‘ರಾಜ್ಯ ಚುನಾವಣಾ ಐಕಾನ್’ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಆ ಜವಬ್ದಾರಿಯನ್ನು ಗಿಲ್ ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಯುವ ಬ್ಯಾಟ್ಸ್ಮನ್ ಅದ್ಭುತ ಶತಕ ಸಿಡಿಸಿದ್ದರು. 12 ಇನ್ನಿಂಗ್ಸ್ಗಳ ನಂತರ ಅವರ ಬ್ಯಾಟ್ನಿಂದ ಈ ಶತಕ ಸಿಡಿದಿತ್ತು. ಅದೇ ವೇಳೆ ಮೂರನೇ ಟೆಸ್ಟ್ನಲ್ಲೂ ಶತಕ ಸಿಡಿಸುವ ಹೊಸ್ತಿಲಿನಲ್ಲಿದ್ದರು. ಆದರೆ 91 ರನ್ಗಳಿದ್ದಾಗ ಗಿಲ್ ರನೌಟ್ಗೆ ಬಲಿಯಾಗಿ ಕೇವಲ 9 ರನ್ಗಳಿಂದ ಶತಕ ವಂಚಿತರಾದರು. ಇದುವರೆಗೆ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಶುಭಮನ್ ಗಿಲ್ ಇಲ್ಲಿಯವರೆಗೆ 252 ರನ್ ಕಲೆಹಾಕಿದ್ದಾರೆ.