ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ
ನವದೆಹಲಿ: ಇಲ್ಲಿನ ಅಲಿಪುರದ (Alipur) ಮಾರುಕಟ್ಟೆಯಲ್ಲಿರುವ ಬಣ್ಣದ ಕಾರ್ಖಾನೆಯೊಂದರಲ್ಲಿ (Paint Factory) ಭೀಕರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 11 ಮಂದಿ ಕಾರ್ಮಿಕರು (Workers) ಸಜೀವ ದಹನವಾದ ಘಟನೆ ಗುರುವಾರ ನಡೆದಿದೆ.
ಅಲಿಪುರದ ದಯಾಲ್ಪುರ ಮಾರುಕಟ್ಟೆಯಲ್ಲಿರುವ ಬಣ್ಣದ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದ್ದು, 11 ಮಂದಿ ಕಾರ್ಮಿಕರ ಸುಟ್ಟ ಮೃತದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿ ಅವಘಡಕ್ಕೂ ಮುನ್ನ ಕಾರ್ಖಾನೆಯಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬೆಂಕಿಯ ಜ್ವಾಲೆ ಪಕ್ಕದ ಮನೆ ಹಾಗೂ ಮುಕ್ತಿ ಕೇಂದ್ರಕ್ಕೂ ಹಬ್ಬಿದೆ. ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಕುಸಿದು ಬಿದ್ದಿದ್ದು, 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸುವುದು ಕಷ್ಟಕರ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ.