ಹೋಟೆಲ್ ನಲ್ಲಿ 27 ವರ್ಷದ ಮಾಜಿ ಮಾಡೆಲ್ ಕೊಲೆ ; ಹೋಟೆಲ್ ಮಾಲೀಕ ಸೇರಿದಂತೆ ಇಬ್ಬರ ಬಂಧನ...!
ನವದೆಹಲಿ: ಗುರುಗ್ರಾಮ್ನ (Gurugram) ಹೋಟೆಲ್ವೊಂದರಲ್ಲಿ (Hotel) 27 ವರ್ಷದ ಮಾಜಿ ಮಾಡೆಲ್ (Ex Model) ಒಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದಾಕೆಯನ್ನು ದಿವ್ಯಾ ಪಹುಜಾ (Divya Pahuja) ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್ನ ಮಾಲೀಕ ಅಭಿಜಿತ್ ಸಿಂಗ್ ಎಂಬಾತ ಆಕೆಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಬಂಧಿಸಿದೆ. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎನ್ನಲಾಗಿದೆ. ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭಿಜಿತ್ ಸೇರಿದಂತೆ ಕೊಲೆ ಆರೋಪಿಗಳು ನೀಲಿ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ದಿವ್ಯಾಳ ಶವವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಭಿಜಿತ್, ಯುವತಿ ಮತ್ತು ಇನ್ನೊಬ್ಬ ವ್ಯಕ್ತಿ ಜನವರಿ 2 ರಂದು (ಮಂಗಳವಾರ) ಮುಂಜಾನೆ 4 ಗಂಟೆಗೆ ಹೋಟೆಲ್ಗೆ ಆಗಮಿಸಿ ಕೊಠಡಿಯೊಂದಕ್ಕೆ ಹೋಗುತ್ತಿರುವ ದೃಶ್ಯವನ್ನು ತೋರಿಸುತ್ತದೆ. ನಂತರ ರಾತ್ರಿ ಅಭಿಜಿತ್ ಮತ್ತು ಇತರರು ದಿವ್ಯಾಳ ದೇಹವನ್ನು ಎಳೆದುಕೊಂಡು ಹೋಗುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುರುಗ್ರಾಮ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೊಲೆಯ ತನಿಖೆ ನಡೆಸುತ್ತಿದ್ದಾರೆ. ಕ್ರೈಂ ಬ್ರಾಂಚ್ನ ಹಲವಾರು ತಂಡಗಳು ಪಂಜಾಬ್ ಮತ್ತು ಇತರ ಪ್ರದೇಶಗಳಲ್ಲಿ ಶವವನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿವೆ. ದಿವ್ಯಾ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಅಭಿಜಿತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಿವ್ಯಾ ಪಹುಜಾ ಯಾರು?: ದಿವ್ಯಾ ಪಹುಜಾ 2016ರ ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿ ‘ನಕಲಿ’ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದಳು. ಅಲ್ಲದೇ ಈಕೆ ಸಂದೀಪ್ ಗಡೋಲಿಯ ಗೆಳತಿಯಾಗಿದ್ದಳು. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್ಕೌಂಟರ್ನಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿಯ ಸಹೋದರಿ ಸುದೇಶ್ ಕಟಾರಿಯಾ ಮತ್ತು ಆತನ ಸಹೋದರ ಬ್ರಹ್ಮ್ ಪ್ರಕಾಶ್ ಅವರು ಅಭಿಜಿತ್ ಜೊತೆ ಶಾಮೀಲಾಗಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ದಿವ್ಯಾ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಹೋಟೆಲ್ ಮಾಲೀಕ ಅಭಿಜಿತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂದೀಪ್ ಗಡೋಲಿ ಹತ್ಯೆಯ ಆರೋಪಿ ದಿವ್ಯಾ ಪಹುಜಾಳಿಗೆ ಕಳೆದ ವರ್ಷ ಜೂನ್ನಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. 2016 ಫೆಬ್ರವರಿ 6ರಂದು ಮುಂಬೈನ ಹೋಟೆಲ್ನಲ್ಲಿ ನಡೆದ ‘ನಕಲಿ’ ಎನ್ಕೌಂಟರ್ನಲ್ಲಿ ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಗಡೋಲಿ ಹತ್ಯೆಯ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.