ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು..!
ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಸೇರಿದಂತೆ ವಿಪಕ್ಷಗಳ 31 ಸಂಸದರನ್ನು ಲೋಕಸಭೆಯಿಂದ (Lok Sabha) ಅಮಾನತುಗೊಳಿಸಲಾಗಿದೆ.
ಕಳೆದ ವಾರ ಆಗಿದ್ದ ಲೋಕಸಭಾ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಪ್ರತಿಭಟಿಸಿದ್ದವು.
ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಯಿತು.
ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಕಳೆದ ವಾರ ವಿಪಕ್ಷಗಳ 13 ಸಂಸದರು ಅಮಾನತುಗೊಂಡಿದ್ದರು. ಈಗ ಮತ್ತೊಂದು ಸುತ್ತಿನಲ್ಲಿ 31 ಸಂಸದರು ಅಮಾನತುಗೊಂಡಿದ್ದಾರೆ. ಇದಲ್ಲದೇ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ. ಇದರರ್ಥ ಒಟ್ಟು 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ 43 ಮಂದಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿದ್ದಾರೆ.
ಅಮಾನತುಗೊಂಡ ಸಂಸದರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ನ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಸದನದಲ್ಲಿ ಪಕ್ಷದ ಉಪನಾಯಕ ಗೌರವ್ ಗೊಗೊಯ್ ಸೇರಿದ್ದಾರೆ.
ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?
ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಾರಣಾಸಿಯಲ್ಲಿ (Varanasi) ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ (Meditation Centre) ‘ಸ್ವರವೇದ ಮಹಾಮಂದಿರ’ವನ್ನು (Swarved Mahamandir) ಸೋಮವಾರ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಧಾನಿ ಮೋದಿ ಧ್ಯಾನ ಮಂದಿರವನ್ನು ವೀಕ್ಷಿಸಿದರು. ಅಲ್ಲದೇ ಮಂದಿರದ ಒಳವಿನ್ಯಾಸ, ರಚನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಮಂದಿರದಲ್ಲಿ ಏಕಕಾಲದಲ್ಲಿ 20,000 ಜನರು ಧ್ಯಾನಕ್ಕಾಗಿ ಕುಳಿತುಕೊಳ್ಳಬಹುದಾಗಿದೆ.
ಈ ಮಹಾಮಂದಿರ ಏಳು ಅಂತಸ್ತಿನ ಮೇಲ್ವಿನ್ಯಾಸವನ್ನು ಒಳಗೊಂಡಿದ್ದು, ಗೋಡೆಗಳ ಮೇಲೆ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ಸ್ವರವೇದ ಮಹಾಮಂದಿರವು ಪ್ರಾಚೀನ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಆಧುನಿಕ ವಾಸ್ತುಶಿಲ್ಪದ ಸಂಯೋಜನೆಯಾಗಿದೆ.
ಬಳಿಕ ಮಾತನಾಡಿದ ಮೋದಿ, ಸಂತರ ಒಡನಾಟದಲ್ಲಿರುವ ಕಾಶಿಯ ಜನರು ಒಟ್ಟಾಗಿ ಅಭಿವೃದ್ಧಿ ಮತ್ತು ಆವಿಷ್ಕಾರದ ಹೊಸ ದಾಖಲೆಗಳನ್ನು ರಚಿಸಿದ್ದಾರೆ ಮತ್ತು ಕಾಶಿಯ ಪುನರುಜ್ಜೀವನಕ್ಕಾಗಿ ಸರ್ಕಾರ, ಸಮಾಜ ಮತ್ತು ಸಂತರು ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದು. ಈ ವೇಳೆ ಮಹರ್ಷಿ ಸದಾಫಲ್ ದೇವ್ ಜಿ ಅವರನ್ನು ಸ್ಮರಿಸಿದ ಮೋದಿ ವಾರಣಾಸಿಯ ಈ ಮಹಾನ್ ದೇವಾಲಯ ಸದಾಫಲ್ ದೇವ್ ಜಿಯವರ ಬೋಧನೆ ಮತ್ತು ಬೋಧನೆಗಳ ಸಂಕೇತವಾಗಿದೆ ಎಂದು ಹೇಳಿದರು.
ನಮ್ಮ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವುದನ್ನು ಮರೆತಿದೆ ಮತ್ತು ಈ ದೇಶದಲ್ಲಿ ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೂ ವಿರೋಧವಿದೆ. ಆದರೆ ಈಗ ಕಾಲ ಬದಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂದರು.