ಮಕ್ಕಳ ಮೇಲೆ ಹಲ್ಲೆಗೈದ ತಾಯಿ – ಮಗಳು ಸಾವು!

– ಹಲ್ಲೆ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ
ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ತಾಯಿಯೇ ಮಕ್ಕಳ ಮೇಲೆ ದೊಣ್ಣೆಯಿಂದ ಹಲ್ಲೆಗೈದು ಮಗಳನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಹರಪ್ಪನಹಳ್ಳಿ (Harapanahalli) ತಾಲ್ಲೂಕಿನ ಹುಲಿಕಟ್ಟೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯ ಮತ್ತೋರ್ವ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೇಗಮ್ ಎಂಬಾಕೆ ತನ್ನ ಮಕ್ಕಳಾದ ಶಮಬಾನು ಹಾಗೂ ಮಗ ಅಮಾನುಲ್ಲಾ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಗ ಅಮಾನುಲ್ಲಾ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಬೇಗಮ್, ಕ್ಷುಲ್ಲಕ ಕಾರಣಕ್ಕೆ ಮಕ್ಕಳೊಂದಿಗೆ ಜಗಳ ಮಾಡಿದ್ದಾಳೆ. ಅದೇ ಸಿಟ್ಟಿನಲ್ಲಿ ತಡರಾತ್ರಿ ಮಲಗಿದ್ದ ಇಬ್ಬರೂ ಮಕ್ಕಳ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ.
ಯಾವಾಗಲೂ ಅವರ ಮನೆಯಲ್ಲಿ ಜಗಳವಾಗುತ್ತಿತ್ತು. ಕಳೆದ ರಾತ್ರಿ ಕೂಡ ಅದೇ ರೀತಿ ಜಗಳವಾಡಿರಬಹುದು ಎಂದು ಈ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಬೆಳಗ್ಗೆ ಎಷ್ಟೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆ ಅನುಮಾನಗೊಂಡ ಸಂಬಂಧಿಕರು ಮನೆ ಒಳಗೆ ನೋಡಿದಾಗ ಈ ವಿಚಾರ ತಿಳಿದಿದೆ. ಬಳಿಕ ಗಾಯಗೊಂಡು ನರಳುತ್ತಿದ್ದ ಅಮಾನುಲ್ಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಜಯನಗರ (vijayanagar) ಎಸ್ಪಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹರಪ್ಪನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿವಿ ರಿಮೋಟ್ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ
ಚಿತ್ರದುರ್ಗ: ಟಿವಿ ರಿಮೋಟ್ಗಾಗಿ (Tv Remote) ಅಣ್ಣ-ತಮ್ಮಂದಿರ (Brothers) ನಡುವೆ ಗಲಾಟೆ ನಡೆದ ಹಿನ್ನೆಲೆ ಸಿಟ್ಟಿಗೆದ್ದ ತಂದೆ (Father) ಹಿರಿಮಗನ ಮೇಲೆ ಕತ್ತರಿ (Scissors) ಎಸೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಜಿಲ್ಲೆಯ ಮೊಳಕಾಲ್ಮೂರು (Molakalmuru) ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಿರಿಮಗ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣ್ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ.
ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.