ಬೈಕ್ ಸ್ಕಿಡ್, ಇಬ್ಬರು ಸವಾರರ ಮೇಲೆ ಹರಿದ ಕಾರು; ಕೇರಳದ ಯುವಕರ ದುರಂತ ಅಂತ್ಯ
ದಾವಣಗೆರೆ, ಸೆ.07: ಜಾಲಿ ರೈಡ್ ಬಂದಿದ್ದ ಕೇರಳದ ಇಬ್ಬರು ಬೈಕ್ ಸವಾರರು ದಾವಣಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 54ರಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ(Accident Death). ಕೇರಳ ಮೂಲದ ಅತುಲ್(25), ಋಷಿಕೇಶ್(24) ಮೃತ ದುರ್ದೈವಿಗಳು. ಎನ್ ಫೀಲ್ಡ್ ಹಿಮಾಲಯನ್ ಬೈಕ್ನಲ್ಲಿ ಕೇರಳದಿಂದ ಬಂದಿದ್ದ ಯುವಕರು ದಾವಣಗೆರೆಯ ಎಸ್.ಎಸ್. ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಮೃತ ಯುವಕರು ಕೇರಳದಿಂದ ಜಾಲಿ ರೈಡ್ಗೆ ಬಂದಿದ್ದರು ಎನ್ನುವುದು ಪೊಲೀಸರು ಪ್ರಾಥಮಿಕ ಮಾಹಿತಿಯಲ್ಲಿ ಬಯಲಾಗಿದೆ.
ಬೈಕ್ ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಬ್ರಿಡ್ಜ್ ಬಳಿಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಬ್ರಿಡ್ಜ್ ಮೇಲಿಂದ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಕಾರು ಹರಿದು ಇಬ್ಬರು ಬೈಕ್ ಸವಾರರ ಸಾವಾಗಿದೆ. ಇನ್ನು ರಸ್ತೆಯ ಮಧ್ಯೆ ಬಿದ್ದ ಬೈಕ್ಗೆ ಕಾರು ಡಿಕ್ಕಿಯಾಗಿದ್ದು ಕಾರು ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕಿ ಸಾವು
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ 14 ವರ್ಷದ ತುಳಸಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ. 8ನೇ ತರಗತಿ ವಿದ್ಯಾರ್ಥಿನಿ ತುಳಸಿ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
8ನೇ ತರಗತಿ ಓದುತ್ತಿರುವ ನಿವೇದಿತಾ, ತುಳಸಿ ಇಬ್ಬರೂ ಶಾಲೆಗೆ ತೆರಳಲು ಬಸ್ಗೆ ಕಾಯುತ್ತ ಅಂಗಡಿ ಬಳಿ ನಿಂತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಬಸ್ ಅಂಗಡಿಗೆ ಗುದ್ದಿತ್ತು. ಈ ಅಪಘಾತದಲ್ಲಿ 5 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಐವರ ಪೈಕಿ ತುಳಸಿ ಮೃತಪಟ್ಟಿದ್ದು ಉಳಿದ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಆಕ್ರೋಶಗೊಂಡ ಸ್ಥಳೀಯರು ಬಸ್ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನೆ ಬಳಿಕ ಖಾಸಗಿ ಬಸ್ ಚಾಲಕ ಪರಾರಿಯಾಗುದ್ದು ಘಟನಾ ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.