ಮೈತ್ರಿ ಕೂಟಕ್ಕೆ ‘BHARAT’ ಎಂದು ಹೆಸರು, ಅರ್ಥ ತಿಳಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ !
ಹೊಸ ದಿಲ್ಲಿ: ದೇಶದ ಹೆಸರನ್ನು ಭಾರತ ಎಂದು ಬದಲಿಸುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ವಿರೋಧ ಪಕ್ಷಗಳ ಮೈತ್ರಿ ಕೂಟದ ಹೆಸರು INDIA ಎಂದೇ ಇರುವ ಹಿನ್ನೆಲೆಯಲ್ಲಿ ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಾಯಿಸಿದರೆ, ಆಗಬಹುದಾದ ಲಾಭ ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್, ವಿರೋಧ ಪಕ್ಷಗಳ ಮೈತ್ರಿ ಕೂಟದ ಹೆಸರನ್ನು BHARAT ಎಂದೇ ಬದಲಾವಣೆ ಮಾಡಿ ಎಂದು ಸಲಹೆ ನೀಡಿದ್ಧಾರೆ.
Alliance for Betterment, Harmony And Responsible Advancement for Tomorrow ಎಂಬ ಹೆಸರಿನ ಸಂಕ್ಷಿಪ್ತ ರೂಪ BHARAT ಎಂದಾಗುತ್ತದೆ. ಕನ್ನಡದಲ್ಲಿ ಹೇಳೋದಾದ್ರೆ, ನಾಳೆಗಾಗಿ ಉತ್ತಮ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಗಾಗಿ ಮೈತ್ರಿ ಕೂಟ ಎಂಬ ಅರ್ಥ ಬರುತ್ತದೆ. ಹೀಗಾಗಿ, ವಿರೋಧ ಪಕ್ಷಗಳ ಒಕ್ಕೂಟಕ್ಕೆ BHARAT ಮೈತ್ರಿ ಕೂಟ ಎಂಬ ಹೆಸರು ಅರ್ಥಗರ್ಭಿತ ಆಗಲಿದೆ ಎಂದು ಶಶಿ ತರೂರ್ ಸಲಹೆ ನೀಡಿದ್ಧಾರೆ. ಅಷ್ಟೇ ಅಲ್ಲ, ಈ ರೀತಿ ಮೈತ್ರಿ ಕೂಟದ ಹೆಸರು ಬದಲಾವಣೆ ಮಾಡುವುದರಿಂದ ‘ದೇಶದ ಹೆಸರು ಬದಲಿಸುವ ಆಟ’ ಕೊನೆಗೊಳ್ಳುತ್ತದೆ ಎಂದೂ ಶಶಿ ತರೂರ್ ಹೇಳಿದ್ದಾರೆ.
ಸದ್ಯ ವಿರೋಧ ಪಕ್ಷಗಳ ಮೈತ್ರಿ ಕೂಟದ ಹೆಸರು INDIA ಎಂದೇ ಹೆಸರಾಗಿದೆ. Indian National Developmental Inclusive Alliance ಎಂಬುದರ ಸಂಕ್ಷಿಪ್ತ ರೂಪವೇ INDIA. ಕನ್ನಡದಲ್ಲಿ ಹೇಳೋದಾದ್ರೆ, ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ ಕೂಟ ಎಂದು ಭಾಷಾಂತರ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟದ ನಾಯಕರ ಎರಡನೇ ಸಭೆಯಲ್ಲಿ ಮೈತ್ರಿ ಕೂಟಕ್ಕೆ INDIA ಎಂದು ಹೆಸರಿಡಲಾಗಿತ್ತು. ಇದೀಗ ದೇಶದ ಹೆಸರನ್ನು ಇಂಡಿಯಾ ಬದಲಿಗೆ ಭಾರತ ಎಂದು ಬದಲಿಸಲು ಸರ್ಕಾರ ಮುಂದಾಗಿದೆ ಎಂಬ ವಿಚಾರ ವಿಪಕ್ಷ ಮೈತ್ರಿ ಕೂಟದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.
ಜಿ – 20 ಶೃಂಗ ಸಭೆಯ ಭೋಜನ ಕೂಟದ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳನ್ನು ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಮೂದಿಸಿತ್ತು. ಜಿ – 20 ಶೃಂಗ ಸಭೆಗೆ ಬರುವ ವಿದೇಶಿ ಅತಿಥಿಗಳಿಗೆ ನೀಡಲು ಸಿದ್ದಪಡಿಸಿರುವ ಭಾರತದ ಇತಿಹಾಸ ವಿವರಿಸುವ ಕಿರು ಪುಸ್ತಕದಲ್ಲೂ ದೇಶದ ಹೆಸರನ್ನು ಭಾರತ ಎಂದೇ ನಮೂದಿಸಲಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಮಲೇಷ್ಯಾ ದೇಶಕ್ಕೆ ಭೇಟಿ ನೀಡಲಿದ್ದು, ಈ ಕಾರ್ಯಕ್ರಮದ ಪ್ರಕಟಣೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ ಎಂದೇ ನಮೂದಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೆಪ್ಟೆಂಬರ್ 18 ರಿಂದ ಕೇಂದ್ರ ಸರ್ಕಾರ ಸಂಸತ್ನ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನ ಅಜೆಂಡಾ ಏನು ಎಂದು ಈವರೆಗೂ ಹೇಳಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಿಸುವ ನಿರ್ಣಯ ಮಂಡಿಸಬಹುದೇ ಎಂಬ ಊಹಾಪೋಹಗಳೂ ಇವೆ.
ಸಂವಿಧಾನ ಪ್ರಸ್ತಾವನೆಯಲ್ಲಿ ದೇಶದ ಹೆಸರನ್ನು ‘ಇಂಡಿಯಾ, ಅಂದರೆ, ಭಾರತ.. ಇದು ಸಂಯುಕ್ತ ಗಣರಾಜ್ಯವಾಗಿ ಇರಲಿದೆ’ ಎಂದೇ ನಮೂದಿಸಲಾಗಿದೆ. ಇಲ್ಲಿ ಇಂಡಿಯಾ ಹಾಗೂ ಭಾರತ ಎರಡೂ ಹೆಸರುಗಳಿವೆ. ಒಂದು ವೇಳೆ, ಇಂಡಿಯಾ ಅನ್ನೋ ಹೆಸರು ತೆಗೆದು ಕೇವಲ ಭಾರತ ಎಂದೇ ಉಳಿಸಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ.
ಇಂಡಿಯಾ ಬದಲಾಗಿ ಭಾರತ ಎಂದು ದೇಶದ ಹೆಸರು ಬದಲಾವಣೆ ಮಾಡ್ತಿಲ್ಲ; ಇದು ಊಹಾಪೋಹವಷ್ಟೇ – ಕೇಂದ್ರ ಸಚಿವ ಸ್ಪಷ್ಟನೆ
ಹೊಸದಿಲ್ಲಿ: ದೇಶದ ಹೆಸರನ್ನು ‘ಭಾರತ’ ಎಂದು ಅಧಿಕೃತಗೊಳಿಸಿ, ಸಂವಿಧಾನದಿಂದ ‘ಇಂಡಿಯಾ’ ಪದವನ್ನು ಕೈಬಿಡುವ ಯಾವುದೇ ಉದ್ದೇಶವಿಲ್ಲ. ಈ ಕುರಿತು ಬಂದ ವರದಿಗಳು ಕೇವಲ ಊಹಾಪೋಹ ವಷ್ಟೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
‘ಜಿ 20′ ಗಣ್ಯರಿಗೆ ಔತಣಕೂಟಕ್ಕೆ ರಾಷ್ಟ್ರಪತಿ ಭವನದಿಂದ ನೀಡಲಾದ ಆಹ್ವಾನ ಪತ್ರಿಕೆಯಲ್ಲಿ’ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ. ಈ ಆಹ್ವಾನ ಪತ್ರಿಕೆ ವೈರಲ್ ಆದ ಬೆನ್ನಲ್ಲೇ, ಸರಕಾರ ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸಲು ಹೊರಟಿದೆ ಎಂಬ ವಿವಾದ ಭುಗಿಲೆದ್ದಿತ್ತು.
ಭಾರತ ಪದದಿಂದ ಏನು ಸಮಸ್ಯೆ?
ಭಾರತ ಎಂಬ ಪದದಿಂದ ಏನು ಸಮಸ್ಯೆ ಇರಬಹುದು? ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ, ಅವರಿಗೆ ಭಾರತದ ವಿರುದ್ಧ ವಿರೋಧವಿದೆ. ಬಹುಶಃ ಅದಕ್ಕಾಗಿಯೇ ಅವರು ವಿದೇಶಕ್ಕೆ ಹೋದಾಗ ಅಲ್ಲಿ ಭಾರತವನ್ನು ಟೀಕಿಸುತ್ತಾರೆ ” ಎಂದು ಪ್ರತಿಪಕ್ಷಗಳ ಮೇಲೆ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ
ಮತ್ತೊಂದೆಡೆ, ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳ ನಂತರ ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಎಂದು ತಿದ್ದುವ ಅಗತ್ಯವಿದೆಯೇ ಎಂಬ ಮೂಲಭೂತ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗೊಂಡಿದೆ. ದೇಶವನ್ನು ಇನ್ಮುಂದೆ ‘ಇಂಡಿಯಾ’ ಎನ್ನಲೇ ಅಥವಾ ‘ಭಾರತ’ ಎನ್ನಲೇ ಎಂದು ಸಾವಿರಾರು ಜನರು ಪ್ರಶ್ನಿಸುತ್ತಿದ್ದಾರೆ. ಈ ಚರ್ಚೆಯಲ್ಲಿ ಬಿಜೆಪಿ ಮುಖಂಡರು ಕೇಂದ್ರ ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಕೂಡ ಇತಿಹಾಸ, ಸಂಸ್ಕೃತಿಯ ಆಧಾರದಲ್ಲಿ ದೇಶಕ್ಕೆ ‘ಭಾರತ’ ಎಂಬ ಹೆಸರೇ ಸೂಕ್ತ ಎಂದು ವಾದಿಸುತ್ತಿದ್ದಾರೆ.
ಇತ್ತ ವಿರೋಧ ಪಕ್ಷದಳ ಮೈತ್ರಿಕೂಟಗಳು ಯುಪಿಎ ಬದಲಾಗಿ ಐಎನ್ಡಿಐಎ ಎಂದು ಹೆಸರು ಬದಲಾವಣೆ ಮಾಡಿದ ಕಾರಣಕ್ಕೆ ಭಯಪಟ್ಟುಕೊಂಡು ಪ್ರಧಾನಿ ದೇಶದ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ನಾಯಕರು ಲೇವಡಿ ಮಾಡಿದ್ದಾರೆ.