ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರೆವೇರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಮುಖ್ಯಮಂತ್ರಿಗಳು ತೆರೆದ ಜೀಪ್ ನಲ್ಲಿ ಪರೇಡ್ ವೀಕ್ಷಣೆ ಮಾಡಿದರು. ಇದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ನಡೆದ ಧ್ವಜಾರೋಹಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದ್ದರು. ಧ್ವಜಾರೋಹಣದ ಬಳಿ ಸಿಎಂ ಅನುಮತಿ ಪಡೆದು ಡಿಕೆ ಶಿವಕುಮಾರ್ ಭಾಷಣ ಮಾಡಿದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಾಣಿಕ್ ಷಾ ಪರೇಡ್ ಮೈದಾನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಡೀ ಜಗತ್ತಿಗೆ ಒಂದು ಭಾರತದ ಅವಶ್ಯಕತೆ ಇದೆ: ಮೋಹನ್ ಭಾಗವತ್
ಬೆಂಗಳೂರು: 77ನೇ ಸ್ವಾತಂತ್ರೋತ್ಸವ ದಿನಾಚರಣೆ (Independence Day) ಹಿನ್ನೆಲೆ ಬೆಂಗಳೂರಿನ (Bengaluru) ಬಸವನಗುಡಿಯಲ್ಲಿ (Basavanagudi) ಆರ್ಎಸ್ಎಸ್ (RSS) ಮುಖ್ಯಸ್ಥ ಡಾ. ಮೋಹನ್ ಭಾಗವತ್ (Mohan Bhagwat) ಧ್ವಜಾರೋಹಣ ನೆರವೇರಿಸಿದರು. ಮೋಹನ್ ಭಾಗವತ್ಗೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಾಥ್ ನೀಡಿದರು.
ಬಸವನಗುಡಿಯ ವಾಸವಿ ಕನ್ವೆನ್ಶನ್ ಹಾಲ್ನಲ್ಲಿ ಸಮರ್ಥ ಭಾರತ ಎಂಬ ಎನ್ಜಿಒ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಧ್ವಜಾರೋಹಣದ ಬಳಿಕ ಮಾತನಾಡಿದ ಮೋಹನ್ ಭಾಗವತ್, ವಿಶ್ವಕ್ಕೆ ಬೆಳಕು ನೀಡುವುದಕ್ಕಾಗಿಯೇ ಭಾರತ ಸ್ವಾತಂತ್ರ್ಯವಾಗಿದೆ. ಇಡೀ ಜಗತ್ತಿಗೆ ಒಂದು ಭಾರತದ ಅವಶ್ಯಕತೆಯಿದೆ. ಧ್ವಜದ ಸ್ವರೂಪದ ಬಗ್ಗೆ ನಾವು ಯೋಚನೆ ಮಾಡಬೇಕಿದ್ದು, ನಾವು ಸಬಲರಾಗದಿದ್ದರೆ ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ ಎಂದರು.
ಧ್ವಜದ ಸ್ವರೂಪದ ಬಗ್ಗೆ ನಾವು ಯೋಚಿಸಬೇಕು. ನಿರಂತರವಾಗಿ ಕ್ರಿಯಾಶೀಲರಾಗಿರಬೇಕು. ಇದನ್ನೇ ಕೇಸರಿ ಬಣ್ಣ ಸೂಚಿಸುತ್ತದೆ. ತ್ಯಾಗವನ್ನು ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ಮನದ ವಿಕಾರಗಳನ್ನು ನಿರ್ಮೂಲನೆಗೊಳಿಸಲು ಬಿಳಿ ಬಣ್ಣವಿದೆ. ಲಕ್ಷ್ಮಿಯ ಪ್ರೀತಿಗೆ ಹಸಿರು ಬಣ್ಣ ನಮ್ಮ ಸಮೃದ್ಧಿ ಸೂಚಿಸುತ್ತದೆ. ಈ ಸಂದೇಶವನ್ನು ತ್ರಿವರ್ಣ ಧ್ವಜ ನೀಡುತ್ತದೆ ಎಂದು ತಿಳಿಸಿದರು.
ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ ಆದರೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವತಂತ್ರ್ಯ ಸಿಗುತ್ತದೆ. ನಮ್ಮ ಜಲ, ಅರಣ್ಯ, ಜಾನುವಾರುಗಳನ್ನು ಸುಖಿಯಾಗಿಡಬೇಕು. ಈ ಎಲ್ಲ ವಿಚಾರಗಳನ್ನೂ ಮನಸ್ಸಿನಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎನ್ನುತ್ತ ಕೇವಲ 8 ನಿಮಿಷದಲ್ಲಿ ಮೋಹನ್ ಭಾಗವತ್ ಭಾಷಣ ಮುಗಿಸಿದರು.