ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ – ಸುಪ್ರೀಂಕೋರ್ಟ್ ಅಸಮಾಧಾನ, ಸ್ವಯಂ ದೂರು ದಾಖಲು

ನವದೆಹಲಿ: ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರ (Women) ಬೆತ್ತಲೆ ಮೆರವಣಿಗೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ದೂರು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ (Supreme Court) ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸ್ವಯಂ ದೂರು ದಾಖಲಿಸಿದ ಬಳಿಕ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆ ವೇಳೆ ಉಪಸ್ಥಿತರಿರುವಂತೆ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ (D.Y.Chandrachud) ಸೂಚನೆ ನೀಡಿದ್ದರು. ಬಳಿಕ ವಿಚಾರಣೆ ಆರಂಭಿಸಿದ ಸಿಜೆಐ ನಾವು ವಿಡಿಯೋ ನೋಡಿ ವಿಚಲಿತರಾಗಿದ್ದೇವೆ, ಹಿಂಸಾಚಾರ ಪ್ರದೇಶದಲ್ಲಿ ಮಹಿಳೆಯನ್ನು ಸಾಧನವಾಗಿ ಬಳಸಿಕೊಂಡಿರುವುದು ತೀವ್ರ ಕಳವಳಕಾರಿ ಸಂಗತಿ ಎಂದರು.
ಇದು ಮಾನವ ಹಕ್ಕುಗಳ ಉಲ್ಲಂಘನೆ. ಪ್ರಜಾಪುಭುತ್ವ ವ್ಯವಸ್ಥೆಯಲ್ಲಿ ಇದು ಸ್ವೀಕಾರವಲ್ಲ. ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸ್ವಲ್ಪ ಸಮಯ ನೀಡುತ್ತೇವೆ. ಅಪರಾಧಿಗಳನ್ನು ಬಂಧಿಸಲು ಅಧಿಕಾರಿಗಳು ಮೇ ತಿಂಗಳಿನಿಂದ ಕೈಗೊಂಡ ಕ್ರಮಗಳು ಏನು? ಘಟನೆಗಳು ಪುನಾರವರ್ತನೆಯಾಗದಿರಲು ತೆಗೆದುಕೊಂಡ ನಿರ್ಧಾರಗಳೇನು ಎಂಬ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಮುಂದಿನ ಶುಕ್ರವಾರ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣಗಳಲ್ಲಿ ನ್ಯಾಯಾಲಯವು ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ. ಅಂದು ನ್ಯಾಯಾಲಯಕ್ಕೆ ಸರ್ಕಾರ ಉತ್ತರವನ್ನು ನೀಡಬೇಕು ಎಂದು ನಿರ್ದೇಶಿಸಿದರು.
ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ಆರೋಪಿಗಳನ್ನ ಮರಣದಂಡನೆ ಶಿಕ್ಷೆಗೆ ಸರ್ಕಾರ ಪರಿಗಣಿಸಲಿದೆ – ಬಿರೇನ್ ಸಿಂಗ್
ಇಂಫಾಲ್: ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ (Manipur Women Parade) ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನ ಮರಣದಂಡನೆ ಶಿಕ್ಷೆಗೂ ಸರ್ಕಾರ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಗೌರವ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಮಹಿಳೆಯರ ವೀಡಿಯೋ ನೋಡಿ ತೀವ್ರ ಬೇಸರವಾಗಿದೆ. ಸ್ವಯಂ ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಯನ್ನ ಬಂಧಿಸಿದ್ದಾರೆ.
ಪ್ರಸ್ತುತ ಸಂಪೂರ್ಣ ತನಿಖೆ ನಡೆಯುತ್ತಿದೆ, ಮುಖ್ಯ ಆರೋಪಿಗೆ ಮರಣದಂಡನೆಯ ಸಾಧ್ಯತೆಯನ್ನು ಸೇರಿದಂತೆ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನ ನಾವು ಖಚಿತಪಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೆ, ಸುಪ್ರೀಂ ಕೋರ್ಟ್ ಸ್ವಯಂದೂರಿನ ಬಳಿಕ ಘಟನೆಗೆ ಸಂಬಂಧಿಸುದಂತೆ ಸ್ವಯಂ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ, ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಡಿಜಿಪಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದೆ.
ಈ ಬಗ್ಗೆ ಮಾತನಾಡಿರುವ ಅಧ್ಯಕ್ಷೆ ರೇಖಾ ಶರ್ಮಾ, ಘಟನೆಗೆ ಸಂಬಂಧಿಸಿದಂತೆ ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಸಂಜೆ ವೇಳೆಗೆ ಇನ್ನಷ್ಟು ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ. ಟ್ವಿಟರ್ನಲ್ಲಿ ವೀಡಿಯೊಗಳ ಪ್ರಸಾರ ಅನುಮತಿಸುವುದರ ವಿರುದ್ಧ ನಾವು ನೋಟಿಸ್ ನೀಡಿದ್ದೇವೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇಂತಹ ಹಲವು ಘಟನೆಗಳು ರಾಜಸ್ಥಾನ ಮತ್ತು ಮಣಿಪುರದಿಂದ ವರದಿಯಾಗುತ್ತಿವೆ. ನಾನು ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.