ಭೀಕರ ಕಾರು ಅಪಘಾತ – ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್, ಪುತ್ರ ಗ್ರೇಟ್ ಎಸ್ಕೇಪ್
ಲಕ್ನೋ: ಮೀರತ್ನಲ್ಲಿ (Meerut) ನಡೆದ ಭೀಕರ ಕಾರು ಅಪಘಾತದಲ್ಲಿ ಭಾರತದ ಮಾಜಿ ಕ್ರಿಕೆಟಿಗ (Former Indian cricketer) ಪ್ರವೀಣ್ ಕುಮಾರ್ (Praveen Kumar) ಮತ್ತು ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ರಾತ್ರಿ ಅವರ ವಾಹನಕ್ಕೆ ಟ್ರಕ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಪ್ರವೀಣ್ ಕುಮಾರ್ ಮತ್ತು ಅವರ ಮಗ ಇಬ್ಬರೂ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ ಅವರ ಕಾರು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.
ವೇಗದ ಬೌಲರ್ ಆಗಿ ತನ್ನ ಕೌಶಲ್ಯಕ್ಕೆ ಹೆಸರುವಾಸಿಯಾದ ಪ್ರವೀಣ್ ಕುಮಾರ್, ಮೀರತ್ನ ಮುಲ್ತಾನ್ ನಗರದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ನಡೆದ 2008 CB ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
6 ಟೆಸ್ಟ್ ಪಂದ್ಯಗಳು, 68 ಏಕದಿನ ಅಂತಾರಾಷ್ಟ್ರೀಯ (ODI) ಮತ್ತು 10 ಟಿ20 ಅಂತಾರಾಷ್ಟ್ರೀಯ (T20Is) ಪಂದ್ಯಗಳಲ್ಲಿ ಪ್ರವೀಣ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 119 ಪಂದ್ಯಗಳನ್ನಾಡಿದ್ದಾರೆ.