ಪ್ರತಾಪ್ ಸಿಂಹ ಅವರೇ ಬಾಯಿ ಮುಚ್ಕೊಂಡ್ ಇರಿ ಅಷ್ಟೇ ; ನಮ್ಗೂ ಮಾತಾಡೋಕೆ ಬರುತ್ತೆ - ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮಗೂ ಮಾತನಾಡೋಕೆ ಬರುತ್ತದೆ. ಪ್ರತಾಪ್ ಸಿಂಹ ಅವರೇ ಬಾಯಿ ಮುಚ್ಕೊಂಡು ಇರ್ಬೇಕು ಅಷ್ಟೇ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾನ್ಯ ಪ್ರತಾಪ್ ಸಿಂಹ ಅವರೇ, ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದೋದು ಬಿಟ್ಟು ಬಿಟ್ಟಿದ್ದೀರಿ. ಎಫ್ಸಿಐ ಅನ್ನು ದೊಡ್ಡ ಗೋದಾಮು ಇದ್ದಂಗೆ ಅಂತೀರಲ್ಲಾ ನಿಮಗೆ ತಲೆಗಿಲೆ ಕೆಟ್ಟಿದ್ಯಾ? ನಿಮಗೆ ತಾಕತ್ತಿದ್ದರೆ ಎಫ್ಸಿಐ ಬಗ್ಗೆ ಚರ್ಚೆ ಬನ್ನಿ ಎಂದು ಸವಾಲು ಹಾಕಿದರು.
ಸೋಲಿನ ಭೀತಿಯಿಂದ ಪ್ರತಾಪ್ ಸಿಂಹ ಅವರು ಏನೇನೋ ಮಾತನಾಡುತ್ತಾರೆ. ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತೇನ್ರಿ ನಿಮಗೆ? ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡೇ ಗೆದ್ದಿದ್ದೀರಿ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನು ಹೇಳಿ? ತಾಕತ್ ಇದ್ದರೆ ಬಹಿರಂಗ ಸಭೆಗೆ ಬನ್ನಿ ಎಂದರು.
ಇನ್ನು, ಭಾರತೀಯ ಆಹಾರ ನಿಗಮಕ್ಕೆ ಒಂದು ಇತಿಹಾಸ ಇದೆ. ಅದಕ್ಕೆ ದೊಡ್ಡ ವ್ಯವಸ್ಥೆ ಇದೆ. ಅಲ್ಲಿ ಶೇಖರಣೆಯಾಗುವ ದವಸಧಾನ್ಯ ಬಡವರಿಗೆ ತಲುಪಿಸಬೇಕಾಗಿರೋದು ಅದರ ಜವಾಬ್ದಾರಿ. ಅದೇ ರೀತಿಯಾಗಿ ಫುಡ್ ಕಾರ್ಪೊರೇಷನ್ ಇಂಡಿಯಾದ ಅಧಿಕಾರಿಗಳು ನಮಗೆ ಅಕ್ಕಿ ಕೊಡ್ತೀವಿ ಅಂತ ಹೇಳಿದ್ದರು. ಅದಕ್ಕೆ ಹಣ ಕಟ್ಟಿ ಅಂತ ಹೇಳಿದ್ದರು. ಇಂತಹ ಎಫ್ಸಿಐ ಅನ್ನು ದೊಡ್ಡ ಗೋದಾಮು ಅಂತೀರಲ್ಲ, ಇಂತವರೆಲ್ಲಾ ಸಂಸದರು ಆಗ್ತಾರೆ ಎಂಬುದೇ ನಂಗೆ ಬೇಜಾರು ಎಂದರು.
ಅಕ್ಕಿ ಕೊಡದಿರುವುದರ ಹಿಂದೆ ಬಿಜೆಪಿ ಸಂಸದರ ಕುತಂತ್ರ ಇದೆ!
ಭಾರತೀಯ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿ ಕೊಡದಿರುವ ಹಿಂದೆ ರಾಜ್ಯ ಬಿಜೆಪಿ ನಾಯಕರ ಕೈವಾಡ ಇದೆ. ರಾಜ್ಯ ಸರ್ಕಾರ ಜನರಿಗೆ ಅಕ್ಕಿ ಕೊಟ್ಟರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಈ ಹಿನ್ನೆಲೆ ರಾಜಕೀಯ ಕುತಂತ್ರದಿಂದ ಕೇಂದ್ರದ ಅಕ್ಕಿ ರಾಜ್ಯಕ್ಕೆ ಬರದಿರುವಂತೆ ತಡೆಯಲಾಗಿದೆ. ರಾಜ್ಯ ಸರ್ಕಾರ ಅಕ್ಕಿ ಕೊಡಬಾರದು ಬಿಜೆಪಿಯವರ ಪ್ರತಿಭಟನೆ ಯಶಸ್ವಿಯಾಗಬೇಕು ಎನ್ನುವುದು ಅವರ ಧೋರಣೆ. ಇದರ ಹಿಂದೆ ರಾಜ್ಯ ಬಿಜೆಪಿ ಸಂಸದರ ಕುತಂತ್ರ ಇದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡಲು ಆಗಲ್ಲ!
ಇನ್ನು, ಬಿಜೆಪಿ ಸಂಸದ ಮುನಿಸ್ವಾಮಿ ಒಂಥರಾ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. ಅವರು ಮುನಿಸ್ವಾಮಿ ಅಲ್ಲ ‘ಮನಿ’ಸ್ವಾಮಿ. ಒಬ್ಬ ಎಂಪಿ ಹೇಗೆ ಇರಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡುವುದಕ್ಕೆ ಆಗಲ್ಲ. ಚಿಕ್ಕಬಳ್ಳಾಪುರವೂ ಚಿಕ್ಕಬಳ್ಳಾಪುರ ಆಗುವುದಕ್ಕೆ ಏನಿಲ್ಲ ಅಂದ್ರೂ 20 ವರ್ಷ ಬೇಕು. ಚಿಕ್ಕಬಳ್ಳಾಪುರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಇಷ್ಟು ವರ್ಷಗಳ ಕಾಲ ಶಾಸಕರು ಆಗಿದ್ದವರು ಏನ್ ಮಾಡಿದ್ದಾರೋ ಗೊತ್ತಿಲ್ಲ. ನಗರದಲ್ಲಿರುವ ಒಂದೊಂದೆ ಸಮಸ್ಯೆಗಳನ್ನು ಬಗೆಯರಿಸುತ್ತೇನೆ ಎಂದರು.