ದ್ವೇಷ ರಾಜಕಾರಣಕ್ಕೆ ಅವಕಾಶ ನೀಡದೆ ಅಭಿವೃದ್ಧಿಪರ ಚಿಂತನೆಯೊಂದಿಗೆ ಕಾರ್ಯ: ಡಾ.ಮಂಥರ್ ಗೌಡ
ಮಡಿಕೇರಿ (ಜೂ.18) ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆæ ಕೊಡಗು ಜಿಲ್ಲೆಯ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಚುನಾವಣಾ ಸಂದರ್ಭ ಕೆಲವರು ನನ್ನ ಕಾಲೆಳೆದಿದ್ದು ತುಂಬಾ ನೋವಾಗಿದೆ. ಆದರೆ ಯಾವುದೇ ಅಪಪ್ರಚಾರಕ್ಕೆ ಮನ್ನಣೆ ನೀಡದೆ ಈ ಕ್ಷೇತ್ರದ ಜನ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಶಾಸಕನಾಗಿ ನಾನು ದ್ವೇಷ ರಾಜಕಾರಣಕ್ಕೆ ಅವಕಾಶ ನೀಡದೆ ಅಭಿವೃದ್ಧಿಪರ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಜನರ ಪ್ರೀತಿಗಳಿಸಿ ಸರ್ವರ ಏಳಿಗೆಗಾಗಿ ಶ್ರಮಿಸಲು ಬದ್ಧನಿದ್ದೇನೆ. ಜಿಲ್ಲೆಯ ಹಿರಿಯರು ಹಾಗೂ ಅನುಭವಿಗಳು ನನಗೆ ಬೆಂಬಲವಾಗಿ ನಿಂತು ಮಾರ್ಗದರ್ಶನ ನೀಡಬೇಕೆಂದು ಡಾ.ಮಂಥರ್ ಗೌಡ ಮನವಿ ಮಾಡಿದರು.
ನಗರದ ಸಂಘದ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಅತೀ ಚಿಕ್ಕ ವಯಸ್ಸಿನಲ್ಲಿ ಮಂಥರ್ ಅವರು ಶಾಸಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಜಾತಿ, ಮತ, ಭೇದ ಮರೆತು ಜಿಲ್ಲೆಯ ಜನರನ್ನು ಒಂದಾಗಿ ಕೊಂಡೊಯ್ಯುವ ಶಕ್ತಿಯನ್ನು ಕಾವೇರಿ ಮಾತೆ ನೀಡಲಿ ಎಂದು ಹಾರೈಸಿದರು.
ಜನರ ನಿರೀಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡಿದರೆ ಮುಂದಿನ 4-5 ಅವಧಿಗೆ ತಾವು ಶಾಸಕರಾಗಿ ಆಯ್ಕೆಯಾಗಬಹುದು ಎಂದ ಅವರು, ತಮ್ಮ ಅವಧಿಯಲ್ಲಿ ಕೊಡಗು ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಸಂಘದ ಸಲಹೆಗಾರ ಹಾಗೂ ಹಿರಿಯ ವಕೀಲ ಎಂ.ಎ.ನಿರಂಜನ್ ಮಾತನಾಡಿ, ವಿವಿಧ ಪಂಗಡ, ಧರ್ಮಗಳ ಜನ ಕೊಡಗು ಜಿಲ್ಲೆಯಲ್ಲಿದ್ದಾರೆ. ನೂತನ ಶಾಸಕರು ಸಾಮರಸ್ಯ ಮತ್ತು ಸಹಬಾಳ್ವೆಗೆ ಒತ್ತು ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ, ದೀರ್ಘಕೇಶಿ ಶಿವಣ್ಣ, ಸಂಘ ಉಪಾಧ್ಯಕ್ಷರಾದ ಕೆ.ಪಿ.ನಾಗರಾಜು, ಪಿ.ಕೆ.ರವಿ, ಆಡಳಿತ ಮಂಡಳಿಯ ಸದಸ್ಯರಾದ ಟಿ.ಆರ್.ಪುರುಷೋತ್ತಮ, ಕೆ.ಎಂ.ಲೋಕೇಶ್, ತಾಕೇರಿ ಪೊನ್ನಪ್ಪ, ಕೆ.ಕೆ.ರೇಣುಕ, ಜಿ.ಆರ್.ಭುವಿನ್, ಜಾನಕಿ ವೆಂಕಟೇಶ್, ಜಿ.ಬಿ.ಜಗದೀಶ್, ಎ.ಪಿ.ಧರ್ಮಪ್ಪ, ಕೆ.ಪಿ.ಸುರೇಶ್, ಎನ್.ಕೆ.ಅಪ್ಪಸ್ವಾಮಿ, ಬಿ.ಡಿ.ಪುಟ್ಟರಾಜು, ಕೆ.ರಮೇಶ್ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಎಸ್.ಎಲ್.ಬಸವರಾಜು ಸ್ವಾಗತಿಸಿ, ಉಪಾಧ್ಯಕ್ಷ ವಿ.ಪಿ.ಸುರೇಶ್ ವಂದಿಸಿದರು. ನಗರದ ಸಂಘದ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿದರು.