ಇಂದಿರಾ ಕ್ಯಾಂಟೀನ್ ಯೋಜನೆ ಮತ್ತೆ ಆರಂಭಿಸಲು ಸಿಎಂ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಹಿಂದಿನ ಬಾರಿ ಅಧಿಕಾರದ ಅವಧಿಯಲ್ಲಿ ಆರಂಭಿಸಿದ್ದ ಕೆಲ ಪ್ರಮುಖ ಯೋಜನೆಗಳ ಮತ್ತೆ ಆರಂಭಿಸಲು ಮುಂದಾಗಿದೆ. ಇದೀಗ ಮಹತ್ವದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಪುನರಾರಂಭ ಮಾಡುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ಗಳಿಗೆ ಜೀವ ತುಂಬಲು ಮುಂದಾಗಿದೆ. ಹೊಸದಾಗಿ ಟೆಂಡರ್ ಕರೆದು, ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ತೆರೆಯಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಬಹುತೇಕ ಕಡೆ ಇಂದಿರಾ ಕ್ಯಾಂಟೀನ್ ಮುಚ್ಚಿ ಹೋಗಿದೆ. ಈಗ ಮತ್ತೆ ತಮ್ಮ ಸರ್ಕಾರ ಬಂದ ಹಿನ್ನೆಲೆಯಲ್ಲಿ, ತಮ್ಮ ಹಿಂದಿನ ಆಡಳಿತದಲ್ಲಿ ಜಾರಿಗೊಳಿಸಿದ್ದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಪುನಾರಾಂಭಿಸಲು ಸಿಎಂ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಗಳೊಂದಿಗೆ ಗೃಹ ಕಚೇರಿ ಕೃಷ್ಣದಲ್ಲಿ ಮಹತ್ವದ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ.
ಟೆಂಡರ್ ಪ್ರಕ್ರಿಯೆ ಪೂರ್ಣವಾದ ಬಳಿಕ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸುತ್ತೇವೆ. ಈವರೆಗೆ ಬಿಬಿಎಂಪಿಗೆ ಸರ್ಕಾರದಿಂದ ಶೇ. 50 ಹಾಗೂ ಬಿಬಿಎಂಪಿ ಯಿಂದ ಶೇ. 50 ಅನುದಾನ ಭರಿಸಲಾಗುತ್ತಿತ್ತು. ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ. 70 ಅನುದಾನ ಸರ್ಕಾರದಿಂದ ಹಾಗೂ ನಗರ ಸ್ಥಳೀಯ ಸಂಸ್ಥೇಯಿಂದ ಶೇ. 30 ರಷ್ಟು ಭರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹಾಗೆಯೇ ಉಪಹಾರದ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಬೆಲೆಯೇ ಅನ್ವಯವಾಗಲಿದೆ. ಹೊಸದಾಗಿ ಎಲ್ಲಿಲ್ಲಿ ಇಂದಿರಾ ಕ್ಯಾಂಟೀನ್ ಅಗತ್ಯತೆ ಇದೆ ಎಂಬುದರ ಪಟ್ಟಿ ಕೊಡಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದಿರಾ ಕ್ಯಾಂಟೀನ್ಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊಸದಾಗಿ 50 ಕ್ಯಾಂಟೀನ್ಗಳನ್ನು ನಿರ್ಮಿಸಲು 30 ಕೋಟಿ ರೂ. ಅನುದಾನ ಕೋರಿ ಬಿಬಿಎಂಪಿಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ 173 ಸ್ಥಿರ ಮತ್ತು 23 ಮೊಬೈಲ್ ಕ್ಯಾಂಟೀನ್ಗಳಿದ್ದವು. ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದ ಬಹುತೇಕ ಕ್ಯಾಂಟೀನ್ಗಳು ಸ್ಥಗಿತಗೊಂಡಿವೆ.