‘ಶಕ್ತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬಿಜೆಪಿ, ಜೆಡಿಎಸ್ ಟೀಕೆಗಳಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್!
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಉದ್ಘಾಟಿಸಿದ್ದಾರೆ. ವಿಧಾನಸೌಧ (Vidhanasoudha) ದಲ್ಲಿ ನಾಡಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಿಎಸ್ ವಂದಿತಾ ಶರ್ಮಾ ಅವರಿಗೆ ಮೊದಲ ಶೂನ್ಯ ಟಿಕೆಟ್ ನೀಡಿ ಉಚಿತ ಪ್ರಯಾಣ (Free Bus Ticket For Women) ಕ್ಕೆ ಚಾಲನೆಯನ್ನು ಸಿಎಂ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D. K Shivakumar) ‘ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 5 ಗ್ಯಾರಂಟಿ ಕೊಟ್ಟಿದ್ದೆವು, ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಕಾರ್ಯಕ್ರಮವು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿಲ್ಲ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದು, ಈ ಮೂಲಕ ಅವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ನಮ್ಮ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳ ಬಗ್ಗೆ ಬಿಜೆಪಿ, ಜೆಡಿಎಸ್ ಸ್ನೇಹಿತರು ಟೀಕೆಗಳ ಸುರಿಮಳೆಯನ್ನೇ ಸುರಿಸ್ತಿದ್ದಾರೆ. ವಿಪಕ್ಷಗಳಿಗೆ ಉತ್ತರ ನೀಡುವ ಸಾಮರ್ಥ್ಯ ನಮ್ಮ ಬಳಿ ಇಲ್ಲ. ಬಹಳ ಚರ್ಚೆ ಮಾಡಿಯೇ ನಾವು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಇದರಿಂದ ನಮ್ಮ ರಾಜ್ಯ ದಿವಾಳಿ ಆಗುತ್ತೆಂದು ಬಿಜೆಪಿಯವರು ಹೇಳ್ತಿದ್ದಾರೆ, ಆದರೆ ಈಗ ಮಧ್ಯಪ್ರದೇಶದಲ್ಲಿರುವ ಅವರದ್ದೇ ಬಿಜೆಪಿ ಸರ್ಕಾರ ಅಲ್ಲಿನ ಮಹಿಳೆಯರಿಗೆ 1 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಅದೇನೆ ಇರಲಿ ನಾವು ರಾಜ್ಯದ ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದರು.
ಇದೇ ವೇಳೆ ಮಾತನಾಡುತ್ತಾ ‘ಹೆಣ್ಣು ಕುಟುಂಬದ ಕಣ್ಣು ಅನ್ನೋ ಹಾಗೆ ಸರ್ಕಾರದ ಕಣ್ಣು ವಂದಿತ ಶರ್ಮ, ಜನರ ಸೇವೆ ಜನಾರ್ಧನ ಸೇವೆ ಜನರ ಕೆಲಸ ದೇವರ ಕೆಲಸ ಅಂತ ಕೆಂಗಲ್ ಹನುಮಂತಯ್ಯ ಬರೆಸಿದ್ದಾರೆ. ದೇಶಕ್ಕೆ ಇತಿಹಾಸ ಸ್ವಾತಂತ್ರ್ಯ ಬದಲಾವಣೆ ತಂದುಕೊಟ್ಟ ಪಕ್ಷ ನಮ್ಮದು. ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ನಮ್ಮ ಆಡಳಿತ, ನುಡಿ, ನಡೆ ಮೇಲೆ ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ಕೇವಲ ಕೆಲಸಗಳ ಮೂಲಕವೇ ನಾವು ಉತ್ತರ ನೀಡ್ತೇವೆ. ಎರಡು ಮೂರು ತಿಂಗಳಲ್ಲೇ ಎಲ್ಲ ಗ್ಯಾರಂಟಿಗಳ ಜಾರಿಗೆ ತರ್ತೇವೆ ಎಂದರು.