ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!
ಚಿಕ್ಕಮಗಳೂರು: ಹಾವು ಕಡಿದು ಉರಗತಜ್ಞ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.
ನರೇಶ್ ಮೃತ. ಉರಗತಜ್ಞರಾಗಿದ್ದರು. ಹಾವಿನ ರಕ್ಷಣೆಗೆ ತೆರಳಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದಾರೆ. ಕಾಳಿಂಗ ಸೇರಿದಂತೆ ಸಾವಿರಾರು ಹಾವುಗಳನ್ನ ಸೆರೆಹಿಡಿದಿದ್ದರು ನರೇಶ್.
ನಡೆದಿದ್ದೇನು?: ಬೆಳಗ್ಗೆ ನಾಗರಹಾವನ್ನು ರಕ್ಷಣೆ ಮಾಡಿ ಚೀಲದಲ್ಲಿ ಹಾಕಿ ಸ್ಕೂಟಿಯ ಸೀಟ್ ಕೆಳಗೆ ಇಟ್ಟಿದ್ದ ನರೇಶ್ ಅವರು, ಮತ್ತೊಂದು ಹಾವನ್ನು ಹಿಡಿದು ರಕ್ಷಣೆ ಮಾಡಲು ಹೊರಟಿದ್ದರು. ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ಕಚ್ಚಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಉರಗತಜ್ಞ ನರೇಶ್ ಸಾವನ್ನಪ್ಪಿದ್ದಾರೆ. ನಗರದ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ.
ಉರಗತಜ್ಞ ನರೇಶ್ ಅವರ ಬೈಕ್ ಡಿಕ್ಕಿಯಲ್ಲಿ 2 ಹಾವು, ಕಾರಿನಲ್ಲಿ 30ಕ್ಕೂ ಹೆಚ್ಚು ಹಾವುಗಳು ಇದ್ದವು. ಕಾರಿನ ಸೀಟ್, ಡಿಕ್ಕಿಯಲ್ಲಿ 20ಕ್ಕೂ ಹೆಚ್ಚು ಚೀಲದ ತುಂಬೆಲ್ಲಾ ಸೆರೆಹಿಡಿದಿದ್ದ ವಿವಿಧ ಜಾತಿಯ ಹಾವುಗಳು ಇದ್ದವು. ಉರಗತಜ್ಞ ನರೇಶ್ ಅವರು ಹಾವುಗಳನ್ನ ಹಿಡಿದು ಕಾರಿನಲ್ಲಿ ಶೇಖರಿಸಿಕೊಳ್ಳುತ್ತಿದ್ದರು. 15 ದಿನಕ್ಕೊಮ್ಮೆ ಚಾರ್ಮಾಡಿಗೆ ಹೋಗಿ ಬಿಟ್ಟು ಬರುತ್ತಿದ್ದರು ಎನ್ನಲಾಗಿದೆ.