ಕೇರಳದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿ: 6 ಮಕ್ಕಳು ಸೇರಿ 21 ಸಾವು, ಹಲವರು ನಾಪತ್ತೆ

ಮಲಪ್ಪುರಂ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಲ್ಟಿಯಾಗಿ 21 ಮಂದಿ ಸಾವನ್ನಪ್ಪಿರುವ ಘಟನೆ ಮಲಪ್ಪುರಂನ ತಾನೂರ್ ತೂವಲ್ತಿರಾದಲ್ಲಿ ನಡೆದಿದೆ.
6 ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. 20 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಹಲವರು ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 40ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದ್ದು ಇನ್ನು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಪ್ರವಾಸೋದ್ಯಮದ ಅಂಗವಾಗಿ ಪುರಪುಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ದೋಣಿ ಸಂಜೆ 7 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ದೋಣಿ ಮಗುಚಿ ಬಿದ್ದಿದ್ದು ಇದರಿಂದ ಅಪಘಾತದ ಪ್ರಮಾಣ ಹೆಚ್ಚಿದೆ.
ರಜಾ ದಿನವಾಗಿದ್ದರಿಂದ ಇಲ್ಲಿಗೆ ಕುಟುಂಬ ಸಮೇತ ಹಲವರು ಬೋಟಿಂಗ್ ಗೆ ಆಗಮಿಸಿದ್ದರು. ರಕ್ಷಿಸಲ್ಪಟ್ಟವರನ್ನು ಪರಪ್ಪನಂಗಡಿ ಮತ್ತು ತನೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾತ್ರಿಯಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ.
ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತ ಇಬ್ಬರ ಮೃತದೇಹಗಳನ್ನು ತಿರುರಂಗಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.