ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ
ಬಿಜೆಪಿಯ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ (Kailash Vijayvargiya) ಅವರು ಕೆಟ್ಟದಾಗಿ ಬಟ್ಟೆ ಧರಿಸಿರುವ ಹುಡುಗಿಯರು ಹಿಂದೂ ಮಹಾಕಾವ್ಯ ರಾಮಾಯಣದ ರಾಕ್ಷಸಿ ಶೂರ್ಪನಖಿಯನ್ನು ಹೋಲುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಮಧ್ಯಪ್ರದೇಶದ (Madhya Pradesh) ಇಂದೋರ್ನಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದಲ್ಲಿ ಸಚಿವರು ಈ ರೀತಿ ಮಾತನಾಡಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮಾದಕ ದ್ರವ್ಯದ ಪ್ರಭಾವದಿಂದ ಹೆಣ್ಮಕ್ಕಳು ರಾತ್ರಿ ತಮ್ಮ ಮನೆಯಿಂದ ಹೊರಹೋಗುತ್ತಾರೆ. ಅವರನ್ನು ನೋಡಿದರ ಕೆನ್ನೆಗೆ ಬಾರಿಸಿ ಬಿಡಬೇಕು ಎಂದು ಅನಿಸುತ್ತದೆ. ನಾನು ರಾತ್ರಿ ಮನೆಗೆ ಹೊರಟಾಗ, ನಾನು ವಿದ್ಯಾವಂತ ಯುವಕರು ಮತ್ತು ಮಕ್ಕಳನ್ನು ಮಾದಕ ದ್ರವ್ಯಗಳ ಅಮಲಿನಲ್ಲಿರುವುದನ್ನು ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲಾ ಕಾರಿನಿಂದ ಇಳಿದು ಹೋಗಿ ಅವರ ಕೆನ್ನೆಗೆ ರಪ ರಪ ಅಂತ ಏಳೆಂಟು ಬಾರಿ ಬಾರಿಸಬೇಕು ಎಂದು ಅನಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ನಾನು ರಾತ್ರಿಯಲ್ಲಿ ಹೊರಗೆ ಹೋದಾಗ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ ಯುವತಿಯನ್ನು ನೋಡಿದಾಗ, ದೇವರಾಣೆ ಅವರ ಕೆನ್ನೆಗೆ ಬಾರಿಸಬೇಕು ಎಂದು ಅನಿಸುತ್ತದೆ. ಹುಡುಗಿಯರು ಎಂಥೆಂಥಾ ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ. ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ಅವರಲ್ಲಿ ಅಂಥದ್ದೇನೂ ಇಲ್ಲವೇ ಇಲ್ಲ ಅವರು ಶೂರ್ಪನಖರಂತೆ ಕಾಣುತ್ತಾರೆ. ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ, ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ.ನಾನು ತುಂಬಾ ಚಿಂತಿತನಾಗಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
BJP Leader @KailashOnline says girls dress badly & look like ‘Shurpanakha’. This is a reprehensible & demeaning insult to every woman of this country
— Dr. Shama Mohamed (@drshamamohd) April 8, 2023
Where is @smritiirani now? Does she condone this disgusting statement? Or does she only find her voice to attack @RahulGandhi! pic.twitter.com/hzoxrnZpl1
ವಿಜಯವರ್ಗಿಯರ ಹೇಳಿಕೆ ವಿರುದ್ಧ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ ಸ್ಮೃತಿ ಇರಾನಿ ಈಗ ಎಲ್ಲಿದ್ದಾರೆ? ಈ ಅಸಹ್ಯಕರ ಹೇಳಿಕೆಯನ್ನು ಅವರು ಕ್ಷಮಿಸುತ್ತಾರೆಯೇ? ಅಥವಾ ರಾಹುಲ್ಗಾಂಧಿಯ ಮೇಲೆ ದಾಳಿ ಮಾಡಲು ಮಾತ್ರ ಸ್ಮೃತಿ ದನಿಯೆತ್ತುತ್ತಾರೆಯೇ ಎಂದು ಶಮಾ ಕೇಳಿದ್ದಾರೆ.
ಬಿಜೆಪಿ ನಾಯಕರು ಮಹಿಳೆಯರನ್ನು ಪದೇ ಪದೇ ಅವಮಾನಿಸುತ್ತಾರೆ. ಇದು ಅವರ ಆಲೋಚನೆ ಮತ್ತು ಅವರ ಮನೋಭಾವವನ್ನು ತೋರಿಸುತ್ತದೆ. ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಜಿ ಮಹಿಳೆಯರನ್ನು ಶೂರ್ಪನಖ ಎಂದು ಕರೆಯುವುದು ಮತ್ತು ಅವರ ಉಡುಗೆ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡುವುದು ಸ್ವತಂತ್ರ ಭಾರತದಲ್ಲಿ ಸರಿಯೇ?. ಬಿಜೆಪಿ ಕ್ಷಮೆಯಾಚಿಸಿ! ಎಂದು ಕಾಂಗ್ರೆಸ್ ವಕ್ತಾರೆ ಸಂಗೀತ ಶರ್ಮಾ ಹೇಳಿದ್ದಾರೆ.