ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ನೇಪಾಳಕ್ಕೆ ಎಸ್ಕೇಪ್: ಹೈ ಅಲರ್ಟ್ ಘೋಷಣೆ
ಕಾಠ್ಮಂಡು (ಮಾರ್ಚ್ 28, 2023): ಪಂಜಾಬ್ ಪೊಲೀಸರ ನಿಗಾದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿರುವ ಖಲಿಸ್ತಾನಿ ಪ್ರತ್ಯೇಕ ದೇಶದ ಪರ ಹೋರಾಟಗಾರ ಅಮೃತ್ಪಾಲ್ ಸಿಂಗ್ ಈಗಾಗಲೇ ಭಾರತದಿಂದ ಪರಾರಿಯಾಗಿ ನೇಪಾಳದಲ್ಲಿ ಅಡಗಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಯಾವುದೇ ಕಾರಣಕ್ಕೂ ದೇಶ ಬಿಡಲು ಅವಕಾಶ ನೀಡದಂತೆ ನೇಪಾಳ ಸರ್ಕಾರಕ್ಕೆ ಭಾರತ ಮನವಿ ಮಾಡಿದೆ.
‘ಮಾರ್ಚ್ 18ರಂದು ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಂಡ ಅಮೃತ್ಪಾಲ್ ಸಿಂಗ್ (Amritpal Singh) ಸದ್ಯ ನೇಪಾಳದಲ್ಲಿ (Nepal) ತಲೆಮರೆಸಿಕೊಂಡಿರುವ ಶಂಕೆ ಇದೆ. ಈತನ ಬಳಿ ಭಾರತ (India) ಮತ್ತು ಇತರೆ ನಕಲಿ ಪಾಸ್ಪೋರ್ಟ್ ಇದೆ. ಇದನ್ನು ಬಳಸಿಕೊಂಡು ಆತ ಯಾವುದೇ ದೇಶಕ್ಕೆ ಪರಾರಿಯಾಗಲು ಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ಆತ ಎಲ್ಲೇ ಪತ್ತೆಯಾದರೂ ಆತನನ್ನು ಬಂಧಿಸಬೇಕು. ಮತ್ತೊಂದು ವಿದೇಶಕ್ಕೆ ತೆರಳಲು ಅವಕಾಶ ನೀಡಬಾರದು’ ಎಂದು ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿ (Indian Embassy Office) ನೇಪಾಳ ಸರ್ಕಾರಕ್ಕೆ (Nepal Government) ಮನವಿ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕಾಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಈ ಮಾಹಿತಿ ಮತ್ತು ಅಮೃತ್ಪಾಲ್ ಸಿಂಗ್ನ ವೈಯಕ್ತಿಕ ದಾಖಲೆಗಳನ್ನು ಸಂಬಂಧಿತ ಸಂಸ್ಥೆಗಳು, ಹೋಟೆಲ್ಗಳು, ವಿಮಾನಯಾನ ಸಂಸ್ಥೆಗಳಿಗೆ ರವಾನಿಸಲಾಗಿದೆ.