ಒಂದೇ ಕ್ಷೇತ್ರದಲ್ಲಿ ಒಂದೇ ಗಳಿಗೆಯಲ್ಲಿ ಅಬ್ಬರಿಸಿದ ನವ ಗುಳಿಗ- ಬೆಳ್ತಂಗಡಿಯಲ್ಲಿ ಕಣ್ತುಂಬಿಕೊಂಡ ಭಕ್ತರು
ಮಂಗಳೂರು: ಕರಾವಳಿ ಭಾಗದ ಜನರಿಂದ ಹೆಚ್ಚಾಗಿ ಆರಾಧಿಸಲ್ಪಡುವ ಗುಳಿಗ (Guliga) ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ನರ್ತನ ಸೇವೆ ಮಾಡೋದು ಇದೆ. ಆದರೆ ಇಲ್ಲಿ 9 ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತಿದ್ದು, ಇದು ಕರಾವಳಿಯಲ್ಲಿ ನಡೆದಿರೋ ಏಕೈಕ ನವಗುಳಿಗ ಸೇವೆ.
ಹೌದು. ಬೆಳ್ತಂಗಡಿ (Belthangady) ತಾಲೂಕಿನ ವೇಣೂರಿನ ಬರ್ಕಾಜೆ ಎಂಬ ಪುಟ್ಟ ಗ್ರಾಮದಲ್ಲಿ ನವದುರ್ಗೆಯರ ದೇವಸ್ಥಾನದಲ್ಲಿ ಈ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ದುರ್ಗಾಪರಮೇಶ್ವರಿ ಕ್ಷೇತ್ರಪಾಲಕರಾಗಿ 9 ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.
ಸಾಮಾನ್ಯವಾಗಿ ದುರ್ಗಾದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೇ ಇರ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ಈ ರೀತಿಯಾಗಿ ನರ್ತನ ಸೇವೆಯನ್ನು ನೀಡಲಾಗುತ್ತದೆ. ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಬರ್ಕಾಜೆ ಎಂಬ ಗ್ರಾಮದಲ್ಲಿ ಪುನರ್ ನಿರ್ಮಾಣವಾದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ (Sri Durgaparameshwari Temple) ದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ 9 ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ.
ಇದು ತುಳುನಾಡ ಇತಿಹಾಸದಲ್ಲೇ ಮೊದಲಾಗಿದ್ದು, ಇದನ್ನು ವೀಕ್ಷಿಸೋದಿಕ್ಕೆ ದೂರದ ಊರುಗಳಿಂದಲೂ ಜನ ಇಲ್ಲಿಗೆ ಬಂದಿದ್ದು ವಿಶೇಷ. ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳೂ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಕೂಡಾ ಇದೆ. ಹೀಗಾಗಿ ಮುಂಬೈ, ಬೆಂಗಳೂರು, ಚೆನೈ ಮೊದಲಾದೆಡೆಯಿಂದಲೂ ಜನರು ಇಲ್ಲಿಗೆ ಆಗಮಿಸಿ ಈ ನವ ಗುಳಿಗ ನರ್ತನ ಸೇವೆಯನ್ನು ಕಣ್ತುಂಬಿಕೊಂಡಿದ್ದಾರೆ.
ಕಾಂತರ ಸಿನಿಮಾ ಬಂದ ಬಳಿಕ ತುಳುನಾಡಿನ ದೈವಾರಧಾನೆ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಕಾಂತರದ ಕ್ಷೇತ್ರಪಾಲ ಗುಳಿಗ ಹಾಗೂ ಪಂಜುರ್ಲಿ ದೈವಗಳ ನರ್ತನ ನೋಡಲು ಹೊರ ರಾಜ್ಯದಿಂದಲೂ ಜನರು ಬರಲು ಆರಂಭಿಸಿದ್ದಾರೆ. ಹೀಗಿರುವಾಗ ಈ ನವ ಗುಳಿಗಳ ನರ್ತನ ಸೇವೆ ತುಳನಾಡಿನ ಜನರಿಗೆ ಅಚ್ಚರಿ ಮೂಡಿಸಿರುವುದಂತು ಸುಳ್ಳಲ್ಲ.