8 ವರ್ಷದ ಮಗು ಸೇರಿ ಇಬ್ಬರ ಬಲಿ ಪಡೆದ ಸಂಭ್ರಮಾಚರಣೆಯ ಗುಂಡು
ಅಲ್ವಾರ/ಜೈಪುರ: ಉತ್ತರ ಭಾರತದ ಮದುವೆಗಳಲ್ಲಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವುದು ಸಾಮಾನ್ಯವೆನಿಸಿದೆ, ಇದಕ್ಕೆ ನಿಷೇಧವಿದ್ದರೂ ಅನೇಕರು ಆಗಾಗ ತಮ್ಮ ಅದ್ಧೂರಿತವ ವೈಭವ ತೋರಿಸಲು ಹೋಗಿ ಅನೇಕರ ಜೀವಕ್ಕೆ ಎರವಾಗುತ್ತಾರೆ. ಮದುವೆ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿಗೆ 8 ವರ್ಷದ ಬಾಲಕ ಸೇರಿ ಇಬ್ಬರು ಬಲಿಯಾಗಿದ್ದಾರೆ. ರಾಜಸ್ಥಾನದ ಅಲ್ವಾರದಲ್ಲಿ ಈ ದುರಂತ ನಡೆದಿದೆ.
ಅಲ್ವಾರದ (Alwar)ದ ಖೆರ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಮೋಚಿ ಗ್ರಾಮದಲ್ಲಿ (Samochi village) ಈ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ 8 ವರ್ಷದ ಬಾಲಕ ಮತ್ತೊಬ್ಬರು ಮೃತಪಟ್ಟರೆ ಇನ್ನಿಬ್ಬರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮದುವೆಗೆ ಬಂದಿದ್ದ ಇಬ್ಬರು ಅತಿಥಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜ್ವೀರ್ ಸಿಂಗ್ ಎಂಬುವವರ ಪುತ್ರ ದೇವಿ ಸಿಂಗ್ ಎಂಬುವವರ ಮದ್ವೆ ನಿಗದಿಯಾಗಿದ್ದು, ಮದುವೆಗೆ ಬಂದಿದ್ಧ ನೆಂಟರು ಕುಟುಂಬದವರು ಮದುವೆಗೆ ಮೊದಲು ನಡೆಯುವ ಸಂಪ್ರದಾಯವಾದ ‘ಲಗನ್ ಟೀಕಾ’ದಲ್ಲಿ ತೊಡಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗುಂಡಿನ ದಾಳಿ ಮದುವೆಗೆ ಬಂದಿದ್ದ ನೆಂಟರು ಬಂಧುಗಳಲ್ಲಿ ಆತಂಕ ಸೃಷ್ಟಿಸಿತ್ತು. ಸುದ್ದಿ ತಿಳಿದ ಕೂಡಲೇ ಹೆಚ್ಚಿನ ಸಂಖ್ಯೆಯ ಪೊಲೀಸರು ಮದುವೆ ಮನೆಗೆ ದೌಡಾಯಿಸಿದ್ದಾರೆ.
ಮದುವೆಗೆ ಬಂದವರೊಬ್ಬರು ನಡೆಸಿದ ಗುಂಡಿನ ದಾಳಿ ಇಬ್ಬರರನ್ನು ಬಲಿ ಪಡೆದು ಮತ್ತಿಬ್ಬರನ್ನು ಗಾಯಗೊಳಿಸಿದ ಸಂದರ್ಭದಲ್ಲಿ ಉಳಿದ ಅತಿಥಿಗಳು ಭೋಜನ ಸವಿಯುತ್ತಾ, ನೃತ್ಯ ಮಾಡುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಗುಂಡು ಹಾರಿಸಿದವರು ಕುಡಿದ ಮತ್ತಿನಲ್ಲಿದ್ದು, ಬಂದೂಕನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿದ್ದರು ಎಂದು ಕಥುಮಾರ್(Kathumar) ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಹೇಳಿದರು.
ಈ ದುರಂತದಲ್ಲಿ ಮೃತರಾದವರನ್ನು 8 ವರ್ಷದ ಬಾಲಕ ಸಾಗರ್ ಸಿಂಗ್ (Sagar Singh) ಸಲ್ವಾದಿ ಗ್ರಾಮದ ನಿವಾಸಿ 35 ವರ್ಷ ಪ್ರಾಯದ ದಿನೇಶ್ ಕನ್ವಾರ್( Dinesh Kanwar) ಎಂದು ಗುರುತಿಸಲಾಗಿದೆ. 30 ವರ್ಷದ ಹನ್ಸಿ ಕನ್ವಾರ್ (Hansi Kanwar) ಹಾಗೂ 10 ವರ್ಷದ ಪ್ರಾಚಿ ಸಿಂಗ್ (Prachi Singh) ಗಾಯಗೊಂಡವರಾಗಿದ್ದಾರೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತರನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಇವರು ಕೃತ್ಯ ನಡೆಸಿದ್ದು, ಪರಿಣಾಮ ಮುಗ್ಧ ಜೀವಗಳೆರಡು ಬಲಿಯಾಗಿವೆ.