18ರ ಯುವ ದಾಂಡಿಗ ಚೊಚ್ಚಲ ಪಂದ್ಯದಲ್ಲೇ ಕಮಾಲ್; KKR ಭರ್ಜರಿ ಗೆಲುವು
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ 16 ವರ್ಷಗಳೇ ಕಳೆದಿವೆ. ಇದುವರೆ 16 ಸೀಸನ್ಗಳನ್ನು ಆಡಲಾಗಿದ್ದು, ಇದೀಗ 17ನೇ ಸೀಸನ್ ಚಾಲ್ತಿಯಲ್ಲಿದೆ. ಈ ಎಲ್ಲಾ ಸೀಸನ್ಗಳನ್ನು ಆಡಿದ ತಂಡಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಒಂದು. ಆದರೆ ಕಳೆದ ಹದಿನಾರು ಸೀಸನ್ಗಳಲ್ಲಿ ಒಮ್ಮೆಯೂ ಕೆಕೆಆರ್ ಮೊದಲ ಮೂರು ಪಂದ್ಯಗಳನ್ನು ಗೆದ್ದಿರಲಿಲ್ಲ ಎಂಬುದು ವಿಶೇಷ.
ಆದರೆ ಈ ಬಾರಿ ಕೆಕೆಆರ್ ಬಾಯ್ಸ್ ಹೊಸ ಅಧ್ಯಾಯ ಬರೆದಿದ್ದಾರೆ. ಅದು ಸಹ ಭರ್ಜರಿ ಗೆಲುವುಗಳ ಮೂಲಕ ಎಂಬುದು ವಿಶೇಷ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ಗಳ ರೋಚಕ ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಕೆಕೆಆರ್, ಆ ಬಳಿಕ ಆರ್ಸಿಬಿ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೆಕೆಆರ್ 106 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಸೀಸನ್ನ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ಕಳೆದ 16 ಸೀಸನ್ಗಳಲ್ಲಿ ಸಾಧ್ಯವಾಗದ ಉತ್ತಮ ಆರಂಭವನ್ನು ಪಡೆಯುವಲ್ಲಿ ಕೆಕೆಆರ್ ಪಡೆ ಯಶಸ್ವಿಯಾಗಿದೆ.
ಸದ್ಯ ಮೂರು ಗೆಲುವುಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು, ಒಟ್ಟು 6 ಅಂಕಗಳನ್ನು ಹೊಂದಿದೆ. ಹಾಗೆಯೇ ಕೆಕೆಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +2.518 ಇರುವುದು ವಿಶೇಷ. ಅಂದರೆ ಆರಂಭದಲ್ಲೇ ಉತ್ತಮ ರನ್ ರೇಟ್ ಸಂಪಾದಿಸುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 8 ರಂದು ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಕೆಕೆಆರ್ ಆಟಗಾರರಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
RCB ಯಾವತ್ತೂ ಕಪ್ ಗೆಲ್ಲಲ್ಲ ಎಂದ CSK ಮಾಜಿ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 16 ಪಂದ್ಯಗಳು ಮುಗಿದಿವೆ. ಇದರ ಬೆನ್ನಲ್ಲೇ ಯಾರು ಬಲಿಷ್ಠ, ಯಾವ ತಂಡ ಕನಿಷ್ಠ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನವನ್ನು ವಿಮರ್ಶಿಸಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು, ಆರ್ಸಿಬಿ ತಂಡದ್ದು ಯಾವಾಗಲೂ ಇದೇ ಪರಿಸ್ಥಿತಿ. ಅವರು ಎಂದಿಗೂ ಒತ್ತಡವನ್ನು ಮೀರಿ ಪಂದ್ಯವಾಡಿಲ್ಲ. ತಂಡದ ಅಗ್ರಸ್ಥಾನದಲ್ಲಿರುವ ಪ್ರಮುಖ ಆಟಗಾರರು ಎಂದಿಗೂ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದುವೇ ಆರ್ಸಿಬಿ ಸೋಲಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 16 ಸೀಸನ್ಗಳಿಂದಲೂ ಆರ್ಸಿಬಿ ಪ್ರಶಸ್ತಿ ಗೆದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಬೌಲಿಂಗ್ ಲೈನಪ್. ಆರ್ಸಿಬಿ ತಂಡದ ಬೌಲಿಂಗ್ ಘಟಕ ಯಾವಾಗಲೂ ಸಾಕಷ್ಟು ರನ್ ಸೋರಿಕೆ ಮಾಡುತ್ತದೆ. ಅವರ ಬ್ಯಾಟರ್ಗಳು ಕಲೆಹಾಕುವ ರನ್ ಗತಿಗಿಂತ ಆರ್ಸಿಬಿ ಬೌಲರ್ಗಳು ಹೆಚ್ಚಿನ ರನ್ಗಳನ್ನು ಬಿಟ್ಟು ಕೊಡುತ್ತಿರುತ್ತಾರೆ ಎಂದು ರಾಯುಡು ಹೇಳಿದ್ದಾರೆ.
ಆರ್ಸಿಬಿ ಬ್ಯಾಟರ್ಗಳು ಕಲೆಹಾಕುವ ಪ್ರತಿ ಓವರ್ ಸರಾಸರಿ ರನ್ಗಿಂತ ಬೌಲರ್ಗಳು ನೀಡುವ ಸರಾಸರಿ ರನ್ಗಳೇ ಜಾಸ್ತಿ ಇರುತ್ತದೆ. ಒಂದು ರೀತಿಯಲ್ಲಿ ಬ್ಯಾಟರ್ ಮತ್ತು ಬೌಲರ್ಗಳು ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇನ್ನು ಆರ್ಸಿಬಿ ತಂಡ ಒತ್ತಡದಲ್ಲಿರುವಾಗ ಅವರ ಯಾವುದೇ ಪ್ರಮುಖ ಬ್ಯಾಟರ್ ಆಡಲ್ಲ. ಹೀಗಾಗಿಯೇ ಆರ್ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.ಅಷ್ಟೇ ಅಲ್ಲದೆ ಹೀಗೆ ಬ್ಯಾಟಿಂಗ್-ಬೌಲಿಂಗ್ ಸರಿ ಸಮಾನವಾಗಿ ರನ್ ಸರಾಸರಿ ಹೊಂದಿರುವ ಆರ್ಸಿಬಿ ತಂಡವು ಎಂದಿಗೂ ಕಪ್ ಗೆಲ್ಲಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಾಕ್ಷಿಯೇ ಕಳೆದ 16 ಸೀಸನ್ಗಳು. ಈ ಕಥೆ ಈ ಬಾರಿ ಕೂಡ ಮುಂದುವರೆಯುವ ಸಾಧ್ಯತೆಯಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.