ಹಿಂಬದಿಯಿಂದ ಬಂದು ಗುದ್ದಿದ ಕಾರು: ಶಾಲೆಗೆ ಹೊರಟಿದ್ದ ತಂದೆ -ಮಗಳು ಸಾವು
ರಾಮನಗರ: ಶಾಲೆಗೆ ಮಗಳ ಬಿಟ್ಟು ಬರಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದುರಂತ ಘಟನೆ ರಾಮನಗರದಲ್ಲಿ ನಡೆದಿದೆ.
ಬೈಕ್ಗೆ ಕಾರೊಂದು ಹಿಂಬದಿಯಿಂದ ಡಿಕ್ಕಿಯಾಗಿ ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದಿದೆ. ಅಪಘಾತದಲ್ಲಿ ಯೋಗೇಶ್ (47 ವರ್ಷ) ಹಾಗೂ ಮಗಳು ಹರ್ಷಿತಾ(14 ವರ್ಷ) ಮೃತಪಟ್ಟಿದ್ದಾರೆ.
ಮೃತರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ತಂದೆ ಯೋಗೇಶ್ ತಮ್ಮ ಮಗಳಾದ ಹರ್ಷಿತಾರನ್ನು ಶಾಲೆಗೆ ಬಿಟ್ಟು ಬರಲೆಂದು ಹೋಗುತ್ತಿದ್ದಾಗ ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಯೋಗೇಶ್ ಮತ್ತು ಹರ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಅತಿ ವೇಗದ ಚಾಲನೆ ಮತ್ತು ಅಜಾಗರೂಕತೆಯೇ ದುರಂತಕ್ಕೆ ಕಾರಣವಾಗಿದ್ದು, ಅನ್ಯಾಯವಾಗಿ ತಂದೆ ಮತ್ತು ಮಗಳು ಪ್ರಾಣ ಕಳೆದುಕೊಂಡಿದ್ದಾರೆ.
ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಬಂದು ಗಾಯಾಳುಗಳನ್ನು ರಕ್ಷಣೆ ಮಾಡಲು ಮುಂದಾದರೂ ಸ್ಥಳದಲ್ಲಿಯೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಯ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಕಾರಣವಾದ ಕಾರನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಕೃತ್ಯ ನಡೆಸಿ ಪರಾರಿಯಾಗಿರುವ ಕಾರು ಚಾಲಕನ ಬಂಧನಕ್ಕೆ ತೀವ್ರ ಶೋಧ ಕೈಗೊಳ್ಳಲಾಗಿದೆ.