ಹರಕೆ ತೀರಿಸಲು 600 ಮೆಟ್ಟಿಲು ಹತ್ತಿದ ನಟಿ ಸಮಂತಾ
ಅನಾರೋಗ್ಯದ ಕಾರಣದಿಂದಾಗಿ ಕುಗ್ಗಿ ಹೋಗಿರುವ ನಟಿ ಸಮಂತಾ (Samantha), ಚೈತನ್ಯಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ನಿಯಮಿತ ವ್ಯಾಯಾಮ, ಮಿತ ಆಹಾರ, ಧ್ಯಾನ ಹೀಗೆ ಸಲಹೆ ನೀಡಿದವರ ಪ್ರತಿ ಮಾತುಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಇವಲ್ಲದೇ ದೇವರಿಗೂ ಅವರು ಮೊರೆ ಹೋಗಿದ್ದಾರೆ. ಅಧ್ಯಾತ್ಮವನ್ನು ನಂಬುವ ಸಮಂತಾ ತಮಿಳುನಾಡಿನ ಪಳನಿ ಮುರುಗನ್ (Palani Murugan) ದೇವರಿಗೆ ಹರಕೆ ಹೊತ್ತಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಪಳನಿ ಮುರುಗನ್ ದೇವಸ್ಥಾನಕ್ಕೆ (Temple) ಭೇಟಿ ನೀಡಿ ಹರಕೆ ತೀರಿಸಿದ್ದು, ಈ ಹರಕೆಗಾಗಿ ಅವರು ಆರು ನೂರಕ್ಕೂ ಹೆಚ್ಚು ಮೆಟ್ಟಿಲು ಹತ್ತಿ, ಕರ್ಪೂರ ಹಚ್ಚಿ ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕರು ಮತ್ತು ಅವರ ಆಪ್ತರು ಜೊತೆಯಾಗಿದ್ದರು. ಅಲ್ಲದೇ, ಪೊಲೀಸರು ಕೂಡ ಅವರಿಗೆ ಸೂಕ್ತ ಭದ್ರತೆಯನ್ನು ನೀಡಿದ್ದರು.
ಒಂದು ಕಡೆ ಶೂಟಿಂಗ್ ಮತ್ತೊಂದು ಕಡೆ ಶಾಕುಂತಲಂ ಸಿನಿಮಾ ಬಿಡುಗಡೆ. ಆರೋಗ್ಯ ಸುಧಾರಿಸಲಿ ಮತ್ತು ಸಿನಿಮಾ ಗೆಲ್ಲಲಿ ಎಂಬ ಎರಡು ಉದ್ದೇಶ ಇಟ್ಟುಕೊಂಡು ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳು ನಾಡಿನಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಪಳನಿ ಮುರುಗನ್ ದೇವಸ್ಥಾನದ ಭೇಟಿ ಸಮಂತಾಗೆ ನೆಮ್ಮದಿ ನೀಡಿದೆ ಎನ್ನುತ್ತಿದ್ದಾರೆ ಆಪ್ತರು.
ಸಿನಿಮಾಗಳ ಜೊತೆ ಜೊತೆಗೆ ಹಿಂದಿಯ ಸಿಟಾಡೆಲ್ (Citadel) ಸೀರಿಸ್ ನಲ್ಲೂ ಸಮಂತಾ ನಟಿಸುತ್ತಿದ್ದಾರೆ. ಇದೊಂದು ಭಾರೀ ಪ್ರಾಜೆಕ್ಟ್ ಆಗಿದ್ದು, ಈ ಸೀರಿಸ್ ಶೂಟಿಂಗ್ ಗಾಗಿಯೇ ಅವರು ಮುಂಬೈನಲ್ಲಿ ಮನೆ ಕೂಡ ಖರೀದಿ ಮಾಡಿದ್ದಾರೆ. ಮುಂಬೈನಿಂದಲೇ ಅವರು ಚಿತ್ರೀಕರಣಕ್ಕೂ ತೆರಳಲಿದ್ದಾರಂತೆ.