ಮಾರ್ಚ್ನಲ್ಲಿ ರಾಜ್ಯಕ್ಕೆ 3 ಬಾರಿ ಪ್ರಧಾನಿ ಮೋದಿ ಆಗಮನ: ಮಾ.10ರೊಳಗೆ ಮೈಸೂರು - ಬೆಂಗಳೂರು ಹೆದ್ದಾರಿ ಉದ್ಘಾಟನೆ

ಬೆಂಗಳೂರು (ಫೆ.11): ಕೇಂದ್ರ ಸರ್ಕಾರದ ಕಾರ್ಯಕ್ರಮ ಹಾಗೂ ರಾಜಕೀಯ ಸಮಾವೇಶದ ನೆಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮಾರ್ಚ್ ತಿಂಗಳಲ್ಲಿ ಬರೋಬ್ಬರು ಮೂರು ಬಾರಿ ಆಗಮಿಸಲಿದ್ದಾರೆ. ಈ ಮೂಲಕ ಒಂದು ತಿಂಗಳಲ್ಲಿ ಪ್ರಧಾನಮಂತ್ರಿ ಮೋದಿ ಕರ್ನಾಟಕ ರಾಜ್ಯಕ್ಕೆ ಅತಿಹೆಚ್ಚು ಬಾರಿ ಭೇಟಿ ನೀಡಲಿದ್ದಾರೆ.
ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಸ್ವತಃ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕರ್ನಾಟಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರಲಿದ್ದು, ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿಯೇ ರಸ್ತೆ ಉದ್ಘಾಟನೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಮೂರು ಗಂಟೆ ಸಂಚಾರ 90 ನಿಮಿಷಕ್ಕೆ ಇಳಿಕೆ: ರಾಜ್ಯ ರಾಧಾನಿ ಬೆಂಗಳೂರಿನಿಂದ 145 ಕಿ.ಮೀ ದೂರವಿರುವ ಮೈಸೂರು ತಲುಪಲು ಬರೋಬ್ಬರಿ 3 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತಿತ್ತು. ಹೀಗಾಗಿ ಬಹುತೇಕರು ರಸ್ತೆ ಸಂಚಾರವನ್ನು ಕೈಬಿಟ್ಟು ರೈಲು ಸಂಚಾಋದ ಮೊರೆ ಹೋಗಿದ್ದರು. ಆದರೆ, ಈಗ ರಸ್ತೆಯನ್ನು ಸುಮಾರು ೮ ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ಬರೋಬ್ಬರು 10 ಲೇನ್ಗಳಲ್ಲಿ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಯಾವ ನಗರಗಳು ಹಾಗೂ ಹಳ್ಳಿಗಳು ಅಡ್ಡ ಬರದಂತೆ ಬೈಪಾಸ್ ರಸ್ತೆಗಳನ್ನು ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಈಗ ಮೂರು ಗಂಟೆಗಳ ಸಂಚಾರ ಕೇವಲ 90 ನಿಮಿಷಕ್ಕೆ ಇಳಿಕೆಯಾಗಿದೆ.
ಹೈವೇ ಉದ್ಘಾಟನೆಗೆ ನರೇಂದ್ರ ಮೋದಿ ಆಗಮನ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ತಿಂಗಳು 27 ರಂದು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲು ಆಗಮಿಸಲಿದ್ದಾರೆ. ಇದಾದ ಕೇವಲ 15 ದಿನಗಳ ಅವಧಿಯಲ್ಲಿಯೇ ಮತ್ತೊಮ್ಮೆ ಮಾ.10ರೊಳಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ 275 (ಬೆಂಗಳೂರು ಮೈಸೂರು ದಶಪಥ ಹೆದ್ದಾರಿ) ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಅದರಲ್ಲಿಯೂ ರಾಜ್ಯ ವಿಧಾನಸಭಾ ಚುನಾವಣೆ ಇರುವುದರಿಂದ ರಾಜ್ಯಕ್ಕೆ ಪದೇ ಪದೇ ಬಂದು ಹೋಗುತ್ತಿದ್ದಾರೆ. ಇನ್ನು ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯ ನೆಪದಲ್ಲಿ ವಿಧಾನಸಭಾ ಚುನಾವಣಾ ಪ್ರಚಾಋ ಕಾರ್ಯಗಳನ್ನೂ ಇದೇ ನೆಪದಲ್ಲಿ ಮಾಡಿಕೊಳ್ಳಲಾಗುತ್ತಿದೆ.
ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲಿರುವ ಮೋದಿ : ರಾಜ್ಯದಲ್ಲಿ ಹಳೆಯ ಮೈಸೂರು ಭಾಗವಾಗಿರುವ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಭದ್ರಕೋಟೆಯಾಗಿವೆ. ಈಗಾಗಲೇ ಮಂಡ್ಯ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ಕಾರಿ ಕಾರ್ಯಕ್ರಮವಾದ ಗೆಜ್ಜಲಗೆರೆ ಹಾಲು ಸಂಸ್ಕರಣಾ ಘಟಕ ಲೋಕಾರ್ಪಣೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮ ಬಿಜೆಪಿ ಸಮಾವೇಶ ಮಾಡಿದ್ದಾರೆ. ಈಗ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೆಡಿಸ್ ಭದ್ರಕೋಟೆಯನ್ನು ಬೇಧಿಸಲು ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉದ್ಘಾಟನೆ ಮಾಡಲು ಯೋಜನೆ ರೂಪಿಸಲಾಗಿದೆ.
ಮಾರ್ಚ್ನಲ್ಲಿ ಮತ್ತೊಮ್ಮೆ ಕರಾವಳಿಗೆ ಆಗಮನ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾ.೧೦ರೊಳಗೆ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮಾರ್ಚ್ ತಿಂಗಳಲ್ಲಿ ಕರಾವಳಿ ಭಾಗಕ್ಕೆ ಆಗಮಿಸಲಿದ್ದಾರೆ. ಜೊತೆಗೆ, ಮಾರ್ಚ್ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ರಥಯಾತ್ರೆ ಮಹಾಸಂಗಮ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದಾರೆ. ಹೀಗಾಗಿ, ರಾಜ್ಯಕ್ಕೆ ಮಾರ್ಚ್ನಲ್ಲಿ ಒಟ್ಟು ಮೂರು ಬಾರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಒಂದೂವರೆ ತಿಂಗಳಲ್ಲಿ ಮೋದಿ ರಾಜ್ಯಕ್ಕೆ ಬಂದ ವಿವರ:
– ಕಲಬುರಗಿ ಹಾಗೂ ಯಾದಗಿರಿ ತಾಂಡಾಗಳಿಗೆ ಹಕ್ಕು ಪತ್ರ ವಿತರಣೆ
– ಹುಬ್ಬಳ್ಳಿ- ಧಾರವಾಡದಲ್ಲಿ ನಡೆದ ಯುವಜನೋತ್ಸವ
– ತುಮಕೂರಿನಲ್ಲಿ ಹೆಚ್ಎಎಲ್ ಘಟಕದ ಲೋಕಾರ್ಪಣೆ
– 2022 ರ ಜೂನ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮೋದಿ ಒಟ್ಟು ಮೂರು ಬಾರಿ ಬಂದಿದ್ದರು.
– ಫೆ. 27ಕ್ಕೆ ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಬರಲಿದ್ದಾರೆ.
10 ಮೋದಿ ಸಮಾವೇಶ ಆಯೋಜನೆ ಗುರಿ:
ಇನ್ನು ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯು ಮಾರ್ಚ್ ಅಂತ್ಯಕ್ಕೆ ಘೋಷಣೆ ಆಗಲಿದೆ. ಈ ಅವಧಿಯೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ರಾಜ್ಯದಲ್ಲಿ ಬರೋಬ್ಬರಿ 10 ರಾಜಕೀಯ ಸಮಾವೇಶಗಳನ್ನು ಮಾಡುವ ಗುರಿಯನ್ನು ರಾಜ್ಯ ಬಿಜೆಪಿ ಇಟ್ಟುಕೊಂಡಿದೆ. ಈಗಾಗಲೇ 3 ಬೃಹತ್ ಸಮಾವೇಶಗಳು ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ 3 ಸಮಾವೇಶಗಳು ನಿಗದಿಯಾಗಿವೆ. ಉಳಿದಂತೆ 4 ಸಮಾವೇಶಗಳನ್ನು ಆಯೋಜನೆ ಮಾಡಲು ದಿನಾಂಕಕ್ಕೆ ನಿರೀಕ್ಷೆ ಮಾಡಲಾಗುತ್ತಿದೆ.