ಬಾಗಲಕೋಟೆ: ಜಿಲ್ಲೆಯಲ್ಲೊಂದು ಮರ್ಯಾದೆ ಹತ್ಯೆ(Honor killing) ನಡೆದಿದೆ. ಅಳಿಯನನ್ನು ಮಚ್ಚಿನಿಂದ ಕೊಚ್ಚಿ ಮಾವ ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ಅಳಿಯ ಭುಜಬಲ ಕರ್ಜಗಿ(34)ಯನ್ನು ಮಾವ ತಮ್ಮನಗೌಡ ಕೊಚ್ಚಿ ಕೊಲೆ ಮಾಡಿದ್ದಾನೆ.
ತಮ್ಮನಗೌಡ ಪುತ್ರಿ ಭಾಗ್ಯಶ್ರೀ ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಹಗೆ ಸಾಧಿಸುತ್ತಿದ್ದ ತಂದೆ ತನ್ನ ಮಗಳ ಸೌಭಾಗ್ಯವನ್ನೇ ಕಿತ್ತುಕೊಂಡಿದ್ದಾನೆ. ಅಳಿಯನ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇನ್ನು ಕೊಲೆ ಆರೋಪಿ ತಮ್ಮನಗೌಡ ಹಾಗೂ ಕೃತ್ಯಕ್ಕೆ ಸಾಥ್ ಕೊಟ್ಟ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದು ಹುಡುಕಾಟ ಶುರು ಮಾಡಿದ್ದಾರೆ.
ಒಂದೇ ಗ್ರಾಮದ ಕ್ಷತ್ರೀಯ ಜಾತಿಯ ಭಾಗ್ಯಶ್ರೀ ಹಾಗೂ ಜೈನ ಸಮುದಾಯದ ಭುಜಬಲ ಇಬ್ಬರೂ ಪ್ರೀತಿಸಿ ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದರು. ಬಳಿಕ ಇಬ್ಬರೂ ಟಕ್ಕೋಡ ಗ್ರಾಮದಲ್ಲೇ ಬಂದು ನೆಲೆಸಿದ್ದರು. ಮಗಳ ಮದುವೆಯ ಸೇಡು ಇಟ್ಟುಕೊಂಡಿದ್ದ ತಮ್ಮನಗೌಡ, ಡಿ.17ರ ರಾತ್ರಿ 8.30ಕ್ಕೆ ಅಳಿಯನನ್ನು ಕೊಂದು ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಇಬ್ಬರು ಸ್ನೇಹಿತರು ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಘಟನೆ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?