ಹಾಸನ: ಮದುವೆ ನಿಶ್ಚಯವಾಗಿದ್ದ (Engagement) ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತೆ (Minor Girl) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯಲ್ಲಿ ನಡೆದಿದೆ.
ಕೂಡ್ಲೂರು ಗ್ರಾಮದ ದಿನೇಶ್ ಜೊತೆ 2 ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಮದುವೆ ನಿಶ್ಚಯವಾಗಿತ್ತು. ಆಕೆಗೆ ಇನ್ನೂ 16 ವರ್ಷವಾಗಿದ್ದು ಮನೆಯವರೇ ಮದುವೆ ನಿಶ್ಚಯ ಮಾಡಿದ್ದರು. ದಿನೇಶ್ ಆಕೆಯನ್ನು ನವೆಂಬರ್ 29 ರಂದು ರಾಮನಾಥಪುರ ಷಷ್ಠಿ ಜಾತ್ರೆಗೆಂದು ಕರೆದೊಯ್ದಿದ್ದ. ಮಧ್ಯಾಹ್ನ 2:30 ರ ವೇಳೆಗೆ ದಿನೇಶ್ ಆಕೆಯನ್ನು ಕರೆದೊಯ್ದಿದ್ದು 4 ಗಂಟೆ ವೇಳೆಗೆ ಆಕೆಯ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಎಂದು ತಿಳಿಸಿದ್ದಾನೆ.
ಆಕೆಯನ್ನು ಬಳಿಕ ದಿನೇಶ್ ಕುಟುಂಬದವರು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆಕೆ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದಾಳೆ. ಇದೇ ವೇಳೆ ದಿನೇಶ್ ಕೂಡಾ ವಿಷ ಸೇವಿಸಿರುವುದು ತಿಳಿದುಬಂದಿದ್ದು, ಆತನಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಘಟನೆ ಬಗ್ಗೆ ತನಿಖೆಗೆ ಎಸ್ಪಿಗೆ ದೂರು ನೀಡಲಾಗಿದೆ. ಚೈಲ್ಡ್ ಲೈನ್ಗೆ ಬಂದ ಅಪರಿಚಿತ ಕರೆ ಆಧರಿಸಿ ಪೋಷಕರಿಂದ ಮಾಹಿತಿ ಪಡೆದು ದೂರು ದಾಖಲಿಸಲಾಗಿದೆ. ಬಾಲಕಿ ಸಾವಿನ ಬಗ್ಗೆ ಅನುಮಾನ ಇದ್ದು, ಸೂಕ್ತ ತನಿಖೆ ನಡೆಸಲು ಮನವಿ ಮಾಡಲಾಗಿದೆ.
ತನಿಖೆ ವೇಳೆ ಬಾಲಕಿಯ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರುವ ಗುರುತು ಪತ್ತೆಯಾಗಿದೆ. ಈ ಹಿನ್ನೆಲೆ ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?