ಮಕ್ಕಳಿಗೆ ಎಳವೆಯಲ್ಲೇ ಸಕ್ಕರೆ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಆಘಾತಗೊಂಡ ದಂಪತಿ; ಮಕ್ಕಳನ್ನು ನದಿಗೆಸೆದು ದಂಪತಿ ಆತ್ಮಹತ್ಯೆ!

ಚೆನ್ನೈ: ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ತಮ್ಮಿಬ್ಬರು ಅಪ್ರಾಪ್ತ ಮಕ್ಕಳನ್ನು ನದಿಗೆ ದೂಡಿ ತಾವು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ತಮ್ಮ ಇಬ್ಬರೂ ಮಕ್ಕಳಿಗೆ ಎಳವೆಯಲ್ಲೇ ಸಕ್ಕರೆ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಆಘಾತಗೊಂಡ ದಂಪತಿ ಈ ಆಘಾತಕಾರಿ ನಿರ್ಧಾರಕ್ಕೆ ಬಂದಿದ್ದಾರೆ.
41 ವರ್ಷ ಪ್ರಾಯದ ಯುವರಾಜ್ (Yuvraj), ಅವರ 38 ವರ್ಷ ಪ್ರಾಯದ ಪತ್ನಿ ವನ್ವಿಜಿ (Vanvizhi), ಮಕ್ಕಳಾದ 7 ವರ್ಷ ಪ್ರಾಯದ ನಿತಿಶಾ (Nitisha) ಮತ್ತು 4 ವರ್ಷದ ಪ್ರಾಯದ ಅಪ್ಸರಾ (4) ಮೃತಪಟ್ಟವರು. ಮಕ್ಕಳಿಬ್ಬರನ್ನು ನದಿಗೆಸೆದ ದಂಪತಿ ನಂತರ ತಾವು ನದಿಗೆ ಹಾರಿದ್ದಾರೆ. ದನ ಮೇಯಿಸುವವರು ನದಿಯಲ್ಲಿ ನಾಲ್ಕು ಶವ ತೇಲುತ್ತಿರುವುದನ್ನು ನೋಡಿ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸೇಲಂನ ಮೆಟ್ಟೂರು ಪ್ರದೇಶದಲ್ಲಿ ನೆಲೆಗೊಂಡಿರುವ ತಮಿಳುನಾಡು ಕರ್ನಾಟಕ ಗಡಿಯಲ್ಲಿರುವ ಆದಿ ಪಾಲಾರ್ ನದಿ ಈ ಅವಘಡ ನಡೆದಿದೆ. ನಂತರ ಸ್ಥಳೀಯ ಈಜುಗಾರರ ನೆರವಿನಿಂದ ಪೊಲೀಸರು ನಾಲ್ವರ ಶವವನ್ನು ಹೊರತೆಗೆದಿದ್ದಾರೆ.
ಮೃತರು ಸೇಲಂ ದಡಗಪಟ್ಟಿಯ (Dadagapatti) ನೇಕಾರರ ಕಾಲೋನಿ (weaver colony) ನಿವಾಸಿಗಳಾಗಿದ್ದರು. ಯುವರಾಜ್, ಸೂರಮಂಗಲಂನಲ್ಲಿ (Suramangalam) ಎಲೆಕ್ಟ್ರಾನಿಕ್ಸ್ ಉಪಕರಣದ ವ್ಯವಹಾರಗಳ ಉದ್ಯೋಗ ನಡೆಸುತ್ತಿದ್ದರೆ ಇವರ ಪತ್ನಿ ವನ್ವಿಜಿ ಟೈಲ್ಸ್ ವ್ಯಾಪಾರ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಈ ದಂಪತಿಯ ಕಿರಿಯ ಮಗಳಿಗೆ ಇತ್ತೀಚೆಗೆ ರಕ್ತ ಪರೀಕ್ಷೆ ವೇಳೆ ಮಧುಮೇಹ ಇರುವುದು ಗೊತ್ತಾಗಿತ್ತು. ಇವರ ಹಿರಿಯ ಮಗಳು ನಿತಿಶಾ ಕಳೆದ ಮೂರು ವರ್ಷಗಳಿಂದಲೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
ಸಾವಿಗೆ ಮೊದಲು ಯುವರಾಜ್ ತನ್ನ ಕಿರಿಯ ಸಹೋದರ ಹಾಗೂ ಇತರರಿಗಾಗಿ ಪತ್ರ ಬರೆದಿದ್ದು ಕುಟುಂಬ ಸದಸ್ಯರಲ್ಲಿ ತನ್ನ ಮಕ್ಕಳ ನೋವನ್ನು ತನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯುವರಾಜ್ ಹಾಗೂ ವನ್ವಿಜಿ ಹೊಸ ಬಟ್ಟೆಯನ್ನು ಧರಿಸಿ ಮಕ್ಕಳಿಗೂ ಹೊಸಬಟ್ಟೆಗಳನ್ನು ಹಾಕಿಸಿದ್ದಾರೆ ದ್ವಿಚಕ್ರ ವಾಹನದಲ್ಲಿ ನದಿಯತ್ತ ತೆರಳಿದ್ದು, ಮೊದಲಿಗೆ ಮಕ್ಕಳಿಬ್ಬರನ್ನು ನದಿಗೆಸೆದು ನಂತರ ಇವರು ನದಿಗೆ ಹಾರಿದ್ದಾರೆ.
ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕಿ ಭವಾನಿ ನೇತೃತ್ವದಲ್ಲಿ ಸ್ಥಳೀಯ ಈಜುಗಾರರ ನೆರವಿನಿಂದ ದಂಪತಿ ಹಾಗೂ ಮಕ್ಕಳ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂನ ಅಂತಿಯೂರ್ ಸರ್ಕಾರಿ ಆಸ್ಪತ್ರೆಗೆ ( Anthiyur government hospital) ಸಾಗಿಸಲಾಗಿದೆ. ಡಿಸೆಂಬರ್ 26ರಂದು ಈ ಘಟನೆ ನಡೆದಿದ್ದು, ಡಿಸೆಂಬರ್ 27 ರಂದು ಯುವರಾಜ್ ಸಹೋದರ, ಸೇಲಂ ಅನ್ನದಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುಟುಂಬ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.