ಬೆಂಗಳೂರು: ಪಾರ್ಟಿ ಬಳಿಕ ಜಾಲಿ ರೈಡಲ್ಲಿ ಭೀಕರ ಅಪಘಾತ, ಇಬ್ಬರ ಸಾವು
ಬೆಂಗಳೂರು(ಮಾ.15): ಪಾರ್ಟಿ ಮುಗಿಸಿ ಜಾಲಿ ರೈಡ್ಗೆ ಬಂದಿದ್ದಾಗ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಬಸ್ ಹಾಗೂ ಮತ್ತೊಂದು ಕಾರಿಗೆ ಗುದ್ದಿಸಿದ ಪರಿಣಾಮ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮತ್ತು ಆತನ ಸ್ನೇಹಿತ ಸಾವನ್ನಪ್ಪಿರುವ ದಾರುಣ ಘಟನೆ ಮಡಿವಾಳದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಮಂಗಳವಾರ ನಸುಕಿನಲ್ಲಿ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಕಾರ್ತಿಕ್ (24) ಹಾಗೂ ರೂಪೇನ ಅಗ್ರಹಾರದ ಭಗೀರಥ (17) ಮೃತ ದುರ್ದೈವಿ. ತನ್ನ ಮನೆಯಲ್ಲಿ ಗೆಳೆಯನ ಜತೆ ಸೋಮವಾರ ನಡುರಾತ್ರಿವರೆಗೆ ಪಾರ್ಟಿ ಮಾಡಿದ ಕಾರ್ತಿಕ್, ಬಳಿಕ ತನ್ನ ಕಾರಿನಲ್ಲಿ ಗೆಳೆಯನ ಕರೆದುಕೊಂಡು ಜಾಲಿರೈಡ್ಗೆ ಬಂದಿದ್ದಾನೆ. ಆ ವೇಳೆ ವಿಪರೀತ ಮದ್ಯಸೇವಿಸಿ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದರಿಂದ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಕಾರ್ತಿಕ್ ಅಪಘಾತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಹಳ್ಳದ ಕಾರ್ತಿಕ್ ಹಾಗೂ ಪ್ರಕಾಶಂ ಜಿಲ್ಲೆಯ ಭಗೀರಥ ಸ್ನೇಹಿತರು. ರೂಪೇನ ಅಗ್ರಹಾರದ ಖಾಸಗಿ ಕಾಲೇಜಿನಲ್ಲಿ ಭಗೀರಥ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಅದೇ ಕಾಲೇಜಿನ ಹಾಸ್ಟೆಲ್ನಲ್ಲಿ ಆತ ನೆಲೆಸಿದ್ದ. ಇನ್ನು ಎಂಜಿನಿಯರಿಂಗ್ ಮುಗಿಸಿದ ಬಳಿಕ ವೃತ್ತಿಪರ ಸಂಬಂಧಿಸಿದ ಕೋರ್ಸನ್ನು ಕಾರ್ತಿಕ್ ಮಾಡುತ್ತಿದ್ದ. ಈ ಗೆಳೆತನದಲ್ಲಿ ರಾತ್ರಿ ಕಾರ್ತಿಕ್ ಮನೆಯಲ್ಲಿ ಗೆಳೆಯರು ಪಾರ್ಟಿ ಮಾಡಿದ್ದಾರೆ. ಆಗ ಇಬ್ಬರು ಕಂಠಮಟ್ಟಮದ್ಯ ಸೇವಿಸಿದ್ದಾರೆ. ಬಳಿಕ ಮಂಗಳವಾರ ನಸುಕಿನಲ್ಲಿ ಕಾರ್ತಿಕ್, ತನ್ನ ಕಾರಿನಲ್ಲಿ ಗೆಳೆಯ ಭಗೀರಥನ ಜತೆ ಜಾಲಿ ರೈಡ್ಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತ ನಡೆದಿದ್ದು ಹೀಗೆ
ಬೊಮ್ಮನಹಳ್ಳಿ ಕಡೆಯಿಂದ ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಕಾರ್ತಿಕ್, ಮಡಿವಾಳದ ಸಿಲ್್ಕ ಬೋರ್ಡ್ ಆಫ್ ರಾರಯಂಪ್ ಬಳಿ ನಸುಕಿನ 4.40ರ ಸುಮಾರಿಗೆ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿದೆ. ಬಳಿಕ ಬಲ ಬದಿಗೆ ಏಕಾಏಕಿ ಕಾರನ್ನು ಕಾರ್ತಿಕ್ ನುಗ್ಗಿಸಿದ್ದಾನೆ. ಆಗ ಅದೇ ವೇಳೆ ಹೊಸೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿಸಿದ ಕಾರ್ತಿಕ್, ಬಳಿಕ ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ ತಮಿಳುನಾಡಿನ ಸಾರಿಗೆ ಬಸ್ಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿದ್ದೇ ಘಟನೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.