ಬೆಂಗಳೂರಿನಲ್ಲಿ ಹಣದ ಮಳೆ ಸುರಿದ ಅಸಾಮಿ
ಬೆಂಗಳೂರು: ನಗರದ ಮಾರ್ಕೆಟ್ ಫ್ಲೈ ಓವರ್ ನಲ್ಲಿ ಓರ್ವ ವ್ಯಕ್ತಿ ಹಣದ ಮಳೆಯನ್ನೇ ಸುರಿಸಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಫ್ಲೈ ಓವರ್ ಮೇಲೆ ವ್ಯಕ್ತಿಯೋರ್ವ ಬಂದಿದ್ದು ತನ್ನ ಕೈಯಲ್ಲಿದ್ದ ಚೀಲದಿಂದ ಹಣವನ್ನು ತೆಗೆದು ಜನರು ಮೇಲೆ ಎಸೆಯುತ್ತಾ ಹೋಗಿದ್ದಾನೆ. ಅಂದ ಹಾಗೆ ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಜನ ಹಣ ಸುರಿಯುತ್ತಿರುವ ಹಣದ ಮಳೆಯನ್ನು ಹಿಡಿಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು. ಕೆಲವೊಂದು ಜನ ಈತನ ವರ್ತನೆಯಿಂದ ಗಾಬರಿಗೊಂಡಿದ್ದೂ ಇದೆ
ಕೆಲವರು ಎಸೆಯಬೇಡಿ ನಮಗೆ ಕೊಡಿ ಎನ್ನುತ್ತಿದ್ದರೆ, ಇನ್ನು ಕೆಲವರು ಈತ ಈ ರೀತಿ ಯಾಕೆ ಮಾಡುತ್ತಿದ್ದಾನೆ ಎಂದು ನೋಡುತ್ತಾ ನಿಂತಿದ್ದರು. ಈತ ತನ್ನ ಹಣ ಎಸೆಯುವ ಕೆಲಸ ಮುಗಿದ ಮೇಲೆ ಆ ಜಾಗದಿಂದ ಕಾಲ್ಕಿತ್ತಿದ್ದಾನೆ.ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತು ಹಣ ಎಸೆದು ವ್ಯಕ್ತಿ ಹೋಗಿದ್ದಾನೆ.
ಹತ್ತು ರೂಪಾಯಿ ನೋಟುಗಳನ್ನ ವ್ಯಕ್ತಿ ಎಸೆದು ಹೋಗಿದ್ದು, ಆದರೆ ಎಷ್ಟು ನೋಟು ಎಸೆದಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣ ಎಸೆದು ಹೋದ ವ್ಯಕ್ತಿ ಪತ್ತೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.