ಬಸವಣ್ಣ ದೇವಸ್ಥಾನದಲ್ಲಿ ಪೂಜೆ ವಿಚಾರದಲ್ಲಿ ವಿವಾದ, ಅರ್ಚಕನಿಗೆ ಗ್ರಾಮಸ್ಥರಿಂದ ಥಳಿತ
ಹುಬ್ಬಳ್ಳಿ: ಅರ್ಚಕರನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಉಂಟಾದ ವಿವಾದ ವಾಗ್ವಾದ ರೂಪದಿಂದ ಹಲ್ಲೆ ರೂಪಕ್ಕೆ ತಿರುಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಇಂದು ಪೂಜಾ ವಿಚಾರದಲ್ಲಿ ನಡೆದ ವಾಗ್ವಾದ ತಾರಕಕ್ಕೇರಿದ್ದು, ಆಕ್ರೋಶಗೊಂಡಿರುವ ಕೆಲವು ಗ್ರಾಮಸ್ಥರು ಅರ್ಚಕನ ಮೇಲೆ ಹಲ್ಲೆ ನಡೆಸಿದ್ದು, ಓಡೋಡಿ ಬಂದು ಹಲ್ಲೆ ನಡೆಸುತ್ತಿವುದನ್ನು ಕೆಲವು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಪ್ರಕಾಶ್ ಕುಂದಗೋಳ ಮಠ ಅವರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ದೇವಸ್ಥಾನದ ಅರ್ಚಕರಾಗಿರುವ ಇವರೊಂದಿಗೆ ಇಂದು ಪೂಜೆ ವಿಷಯವಾಗಿ ದೇವಸ್ಥಾನದಲ್ಲೇ ಗ್ರಾಮಸ್ಥರು ಗಲಾಟೆ ನಡೆಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ದೇವಸ್ಥಾನದಲ್ಲಿ ಪೂಜೆ ವಿಚಾರದಲ್ಲಿ ವಿವಾದ ಉಂಟಾಗಿದ್ದು, ದೇವಸ್ಥಾನಕ್ಕೆ ಬೇರೆ ಅರ್ಚಕನನ್ನು ನೇಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಆದರೆ ನಾನೇ ಪೂಜೆ ಮಾಡುತ್ತೇನೆ ಎಂದು ಪ್ರಕಾಶ್ ಕುಂದಗೋಳ ಮಠ ಅವರು ಪಟ್ಟು ಹಿಡಿದಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಅರ್ಚಕರು ಹಾಗೂ ಸ್ಥಳೀಯರ ನಡುವೆ ಹಲವು ಬಾರಿ ವಾಗ್ವಾದಗಳು ನಡೆದಿವೆ.
ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇರುವ ವೇಳೆಯೇ ಗ್ರಾಮಸ್ಥರು ಅರ್ಚಕರೊಂದಿಗೆ ಜಗಳಕ್ಕೆ ನಿಂತಿದ್ದು, ಅರ್ಚಕ ಪ್ರಕಾಶ್ ಮಾತ್ರವಲ್ಲದೆ ಅವರ ಮಗನಿಗೂ ಥಳಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಮೇಲೆ ಅರ್ಚಕ ಪ್ರಕಾಶ್ ಆರೋಪ ಮಾಡಿದ್ದಾರೆ. ಇನ್ನು, ವಿಚಾರ ತಿಳಿದ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.