ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿರುವ ಪ್ರಧಾನಿ: ಮೋದಿ ವಿರುದ್ಧ ಯಶೋಮತಿ ಠಾಕೂರ್ ವಾಗ್ದಾಳಿ
ಹುಬ್ಬಳ್ಳಿ (ಮಾ.30) : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪರಮ ಮಿತ್ರ ಅದಾನಿ ರಕ್ಷಣೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಅದರ ಭಾಗವಾಗಿ ಕಾಂಗ್ರೆಸ್ ಯುವ ನಾಯಕ ರಾಹುಲ್ರನ್ನು ಜೈಲಿಗೆ ತಳ್ಳುವ ಯತ್ನ ನಡೆಸಲಾಗುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಸಚಿವೆ ಯಶೋಮತಿ ಠಾಕೂರ(Yashomati Chandrakant Thakur) ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಸ್ವಾತಂತ್ರ್ಯದ ವೇಳೆ ಕಾಂಗ್ರೆಸ್ನವರು ಜೈಲಿಗೆ ಹೋಗಿದ್ದರು. ಈಗ ಪ್ರಜಾಪ್ರಭುತ್ವದ ರಕ್ಷಣೆಗೆ ಎಂತಹ ತ್ಯಾಗಕ್ಕೂ ನಾವು ಬದ್ಧ. ಮತ್ತೆ ಜೈಲಿಗೆ ಹೋಗಲು ನಾವು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಜೋಡೋ ಪಾದಯಾತ್ರೆ(Bharat Jodo Padayatra) ಮೂಲಕ ಇಡೀ ದೇಶ ಸುತ್ತಿರುವ ರಾಹುಲ್(Rahul gandhi) ಜನರ ನಾಡಿಮಿಡಿತ ಅರಿತಿದ್ದಾರೆ. ಬೆಲೆ ಏರಿಕೆಯಿಂದ ಬೇಸತ್ತಿರುವ ಜನರನ್ನು ಮಾತನಾಡಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರಧಾನಿ ಹಾಗೂ ಅದಾನಿ ನಡುವೆ ಇರುವ ಸಂಬಂಧದ ಕುರಿತು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದ ರಾಹುಲ್ ಮೋದಿ ಹಾಗೂ ಅದಾನಿ ಜತೆಗಿರುವ ಭಾವಚಿತ್ರ ಬಿಡುಗಡೆ ಮಾಡಿದ್ದರು. ಅದಾನಿ, ನೀರವ್ ಮೋದಿ, ಲಲಿತ್ ಮೋದಿ ಕುರಿತು ಮಾತನಾಡಿದ ಕಾರಣಕ್ಕಾಗಿ ರಾಹುಲ್ಗಾಂಧಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಇದು ಖಂಡನೀಯ. ನೀರವ್ ಮೋದಿ, ಲಲಿತ್ ಮೋದಿ ದೇಶದ ಹಣವನ್ನು ಹೊರಗಡೆ ಕದ್ದು ಒಯ್ದಿದ್ದಾರೆ. ಆ ಕುರಿತು ಸರ್ಕಾರ ಮೌನ ವಹಿಸಿದೆ. ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.
ನ್ಯಾಯಾಂಗದಲ್ಲಿ ರಾಜಕಾರಣ ನುಸುಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ನ್ಯಾಯಾಂಗ ಹೋರಾಟ ಮುಂದುವರಿಯಲಿದೆ. ನಮಗೆ ನ್ಯಾಯಾಂಗದ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಕರ್ನಾಟಕದಲ್ಲಿ ಬಿಜೆಪಿಯವರು ಅತಿಯಾದ ಆತ್ಮ ವಿಶ್ವಾಸವಿಟ್ಟುಕೊಂಡಿದ್ದಾರೆ. ಅದು ಒಳ್ಳೆಯದಲ್ಲ. ಫಲಿತಾಂಶ ಅವರಿಗೆ ಕಹಿಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ ಹಾಗೂ ಮುಖಂಡರಾದ ವಸಂತಾ ಲದವಾ, ಸದಾನಂದ ಡಂಗನವರ, ಸ್ವಾತಿ ಮಳಗಿ, ಪ್ರಕಾಶ ಕ್ಯಾರಕಟ್ಟಿಇತರರಿದ್ದರು.