ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?
![ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?](https://urtv24.com/wp-content/uploads/2024/06/Petrol-Diesel-Fuel.jpg)
ಬೆಂಗಳೂರು: ತೈಲ ದರ ಏರಿಕೆ (Petrol Diesel Price Hike) ಖಂಡಿಸಿ ಬಿಜೆಪಿಯಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಗ್ಯಾರಂಟಿಗಳಿಗಾಗಿ ಬಡ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಕಮಲ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸುದ್ದಿಗೋಷ್ಠಿ ನಡೆಸಿ, ಬೆಲೆ ಏರಿಕೆ ಸಮರ್ಥನೆ ಮಾಡಿಳ್ಳುವ ಮೂಲಕ ತಿರುಗೇಟು ನೀಡಿದರು.
ಬೆಲೆ ಏರಿಕೆ ಮಾಡಿರುವುದು ಪಿಎಂ ಮೋದಿ, ನಮ್ಮ ಪರಿಹಾರದ ಹಣ ಪಡೆಯಲು ಕೋರ್ಟ್ಗೆ ಹೋಗಬೇಕಾಯಿತು. ಆದರೆ, ಕೇಂದ್ರ ಸರ್ಕಾರದ ನಡೆ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ದಿನ ಮಾತನಾಡಲಿಲ್ಲ, ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿದರು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ನವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.
ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂದು ಹೇಳಿಕೆ ಕೊಡುತ್ತಿದ್ದರು. ನಾನು ಪಿಎಂ ಆದ ಮೇಲೆ ತೈಲ ಬೆಲೆ ಕಡಿಮೆ ಮಾಡುತ್ತೀನಿ ಅಂತ ಹೇಳಿದ್ದರು. ಆದರೆ ಅದರ ವಿರುದ್ಧವಾಗಿ ಮೋದಿ ನಡೆದುಕೊಂಡಿದ್ದಾರೆ. ಮೋದಿ ಪಿಎಂ ಆದಾಗ ಪೆಟ್ರೋಲ್ ಬೆಲೆ 72.26 ರೂ ಇತ್ತು. ಅದು ಜೂನ್ 24ರಲ್ಲಿ 104 ಆಗಿತ್ತು ಈಗ ಕಡಿಮೆ ಆಗಿದೆ. ಡೀಸೆಲ್ ಬೆಲೆ 57.28 ಇತ್ತು, ಅದನ್ನು 98 ರೂಪಾಯಿ ಮಾಡಿದರು. ಯಾರು ಹೆಚ್ಚು ಮಾಡಿದ್ದು? ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ 113 ಡಾಲರ್ ಇತ್ತು, ಈಗ ಎಷ್ಟು ಇದೆ? 82 ಡಾಲರ್ ಇದೆ. ಹೀಗಾಗಿ ಮೋದಿಯೇ ದರ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
ಸಂಪನ್ಮೂಲ ಕ್ರೋಡೀಕರಣ ಎಂದರೆ ಏನು ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಬೆಲೆ ಹೆಚ್ಚಳ ಮಾಡಿದಾಗ ಕೇಂದ್ರದ ವಿರುದ್ಧ ಎಷ್ಟು ಬಾರಿ ಸುದ್ದಿ ಹಾಕಿದ್ದೀರಿ? ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡದ ಬಗ್ಗೆ ಯಾರು ಕೂಡ ಬರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಡವರು, ಅಭಿವೃದ್ಧಿ ಬಗ್ಗೆ ಕಾಳಜಿ ಬಿಜೆಪಿಗೆ ಇಲ್ಲ. ಮೋದಿ ಬೆಲೆ ಹೆಚ್ಚು ಮಾಡಿದರೂ ಬಿಜೆಪಿ ನಾಯಕರು ಮಾತನಾಡಲಿಲ್ಲ. ಅವರಿಗೆ ಈಗ ಕೇಳಲು ಏನು ಅಧಿಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಶೇ.45ಗಿಂತ ವೋಟ್ ಜಾಸ್ತಿ ಆಗಿದೆ. ಒಂದು ಸೀಟ್ನಿಂದ 9ಕ್ಕೆ ಬಂದಿದ್ದೇವೆ. ಅವರು 25ರಿಂದ 19ಕ್ಕೆ ಬಂದಿದ್ದಾರೆ ಅವರಾ? ನಾವಾ ಸೋತಿದ್ದು. ವೋಟ್ ಪರ್ಸೆಂಟೇಜ್ ಶೇ. 13 ಜಾಸ್ತಿ ಆಗಿದೆ ನಮಗೆ, ಕೇಂದ್ರದಲ್ಲಿ ಸೀಟ್ ಕಡಿಮೆ ಆಗಿದೆ ಯಾರು ಸೋತಿದ್ದು ಎಂದು ಪ್ರಶ್ನಿಸಿದರು.
ಯಾರು ಕೂಡ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಅಂತ ಹೇಳಿಲ್ಲ. ವೋಟ್ಗಾಗಿ ಗ್ಯಾರಂಟಿಗಳನ್ನು ಮಾಡಿಲ್ಲ, ಬಡವರಿಗೆ ಅರ್ಥಿಕ ಶಕ್ತಿ ಕೊಡಲು ಜಾರಿ ಮಾಡಿದ್ದೇವೆ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಏನು..?
ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಕೊಡುವ ನೆಪದಲ್ಲಿ ರಾಜ್ಯದ ಬಡವರ ಮೇಲೆ ತೆರಿಗೆ ಹಾಕಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವ ಮೂಲಕ ರಾಜ್ಯದ ಸಾಮಾನ್ಯ ಜನತೆಗೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಎಕ್ಸ್ ಮೂಲಕ ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಪ್ರಗತಿ ಶೂನ್ಯವಾಗಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಇದನ್ನು ಸರಿಪಡಿಸಲು ಹಲವಾರು ವರ್ಷ ಬೇಕು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯರ ಮೇಲೆ ಹೊರೆ ಹಾಕಿ ಬೇರೆ ರಾಜ್ಯಗಳಿಗೆ ವ್ಯಾಪಾರ ತೊಂದರೆಯಾಗುತ್ತದೆ ಎಂದು ಹೇಳಿ ಪಕ್ಕದ ರಾಜ್ಯಗಳ ಮಿತ್ರ ಪಕ್ಷಗಳ ಹಿತ ಕಾಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿರುವುದು ರಾಜದ್ರೋಹ ಮಾಡಿದಂತೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ, ರಾಜ್ಯದಲ್ಲಿ ಪೆಟ್ರೊಲ್, ಡೀಸೆಲ್ ದರ ಕಡಿಮೆ ಇದೆ ಎಂದು ಬಡವರ ಮೇಲೆ ಭಾರ ಹಾಕುವುದು ಯಾವ ನ್ಯಾಯ? ದರ ಏರಿಕೆ ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿಯವರ ಹೇಳಿಕೆ ಜನ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.