ಪತ್ನಿ ಆಥಿಯಾ ಜೊತೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಕೆಎಲ್ ರಾಹುಲ್ ಭೇಟಿ!
ಭೋಪಾಲ್: ಸದ್ಯ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ (Australia Test Cricket) ಫಾರ್ಮ್ ಕಳೆದುಕೊಂಡಿರುವ ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ (KL Rahul) 3ನೇ ಟೆಸ್ಟ್ ಅಭ್ಯಾಸಕ್ಕೂ ಮುನ್ನವೇ ಪತ್ನಿ ಅಥಿಯಾ ಶೆಟ್ಟಿ (Athiya Shetty) ಜೊತೆ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯಾ (Australia) ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ಗಾಗಿ ಭಾರತ ತಂಡ ಇಂದೋರ್ ತಲುಪಿದ್ದು, ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ರಾಹುಲ್ ಮೊದಲ ಬಾರಿಗೆ ಪತ್ನಿಯೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwar Temple) ಭೇಟಿ ನೀಡಿದ್ದರು. ಪ್ರಮುಖ ಭಸ್ಮ ಆರತಿಯಲ್ಲೂ ದಂಪತಿ ಭಾಗವಹಿಸಿದರು.
ದೇವಸ್ಥಾನದ ನವಗ್ರಹಕ್ಕೆ ತೆರಳಿದ್ದ ನವದಂಪತಿ ಪೂಜಾ ಕೈಂಕರ್ಯಗಳನ್ನು ವಿಧಿ ವಿಧಾನಗಳ ಅನ್ವಯ ನೆರವೇರಿಸಿದರು. ನಂದಿ ಸಭಾಂಗಣದಲ್ಲಿ ಕೆಲಹೊತ್ತು ಧ್ಯಾನ ಮಾಡಿದರು.
ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ಗಳಲ್ಲಿ ಕೆಎಲ್ ರಾಹುಲ್ ಬದಲಿಗೆ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಸುಳಿವು ನೀಡಿದ್ದಾರೆ. ಭಾರತದ ಉಪನಾಯಕ ರಾಹುಲ್ ಅವರ ಕೆಟ್ಟ ಫಾರ್ಮ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ.
ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆಯ ಹೊರತಾಗಿಯೂ, ಗಿಲ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ರಾಹುಲ್ ಮೇಲೆ ಇದರಿಂದಾಗಿ ಒತ್ತಡ ಹೆಚ್ಚಾಗುತ್ತಿದೆ. “ತಂಡದ ಮ್ಯಾನೇಜ್ಮೆಂಟ್ಗೆ ಅವರ (ರಾಹುಲ್) ಫಾರ್ಮ್ ತಿಳಿದಿದೆ, ಅವರಿಗೆ ಅವರ ಮಾನಸಿಕ ಸ್ಥಿತಿ ತಿಳಿದಿದೆ. ಅವರು ಗಿಲ್ನಂತಹವರನ್ನು ಹೇಗೆ ನೋಡಬೇಕು ಎಂದು ಅವರಿಗೆ ತಿಳಿದಿದೆ” ಎಂದು ಐಸಿಸಿ ರಿವ್ಯೂ ಪಾಡ್ಕಾಸ್ಟ್ನಲ್ಲಿ ಶಾಸ್ತ್ರಿ ಹೇಳಿದ್ದಾರೆ.