ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ; ವಿಡಿಯೋ ವೈರಲ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಹಾಗೂ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸದ್ಯ ಕ್ರಿಕೆಟಿಗ ಪಂತ್ ಕಾರು ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿದ್ದಾರೆ. ಇತ್ತ ಊರ್ವಶಿ ಕೂಡ ಪಂತ್ ಚೇತರಿಕೆಗೆ ಹಾರೈಸಿ, ತಮ್ಮಿಬ್ಬರ ನಡುವಿನ ಸೋಶಿಯಲ್ ಮೀಡಿಯಾ ವಾರ್ಗೆ ಕದನ ವಿರಾಮ ಘೋಷಿಸಿದ್ದರು. ಆದರೆ ಪತ್ರಕರ್ತರು ಮಾತ್ರ ಊರ್ವಶಿ ಸಿಕ್ಕಾಗಲೆಲ್ಲ ಪಂತ್ ಬಗ್ಗೆ ಪ್ರಶ್ನೆ ಕೇಳುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಇಷ್ಟು ದಿನ ಪತ್ರಕರ್ತರು ಪಂತ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಊರ್ವಶಿ, ಇದೀಗ ಪಂತ್ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.
ಇತ್ತೀಚೆಗೆ ರಿಷಬ್ ಬಗ್ಗೆ ಊರ್ವಶಿಯನ್ನು ಪ್ರಶ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ. ಇದರಲ್ಲಿ ಪಾಪರಾಜಿಯೊಬ್ಬ ಕೇಳಿದ ಪ್ರಶ್ನೆಗೆ ಊರ್ವಶಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನಿಮಗೆ ಬೇಕಿರುವುದು ಟಿಆರ್ಪಿ, ಟಿಆರ್ಪಿ ಅಷ್ಟೆ
ಇನ್ಸ್ಟಂಟ್ ಬಾಲಿವುಡ್ ಎಂಬ ಹೆಸರಿನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಊರ್ವಶಿಯವರ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಊರ್ವಶಿಗೆ ರಿಷಬ್ ಪಂತ್ ಬಗ್ಗೆ ಪ್ರಶ್ನಿಸಲಾಗಿದೆ. ಆದರೆ ಇದಕ್ಕೆ ಉತ್ತರಿಸಲು ನಿರಾಕರಿಸಿದ ಊರ್ವಶಿ ಆ ಪ್ರಶ್ನೆ ಕೇಳಿದ ಪಾಪರಾಜಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಾಸ್ತವವಾಗಿ ಆ ಪಾಪರಾಜಿ, ನೀವು ಪಂತ್ ಬಗ್ಗೆ ಏನಾದರೂ ಹೇಳುತ್ತೀರಾ? ಪಂತ್ಗೆ ಕಾರು ಅಪಘಾತವಾದಾಗ ನೀವು ಅವರಿಗೆ ಶುಭ ಹಾರೈಸಿದ್ದೀರಿ. ಇದೀಗ ನೀವು ಅವರೊಂದಿಗೆ ಮಾತನಾಡಿದ್ದೀರಾ ಅಥವಾ ಮೆಸೆಜ್ ಕಳುಹಿಸಿದ್ದೀರಾ? ಎಂದು ಊರ್ವಶಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಊರ್ವಶಿ, ‘ನಿಮಗೇನು ಬೇಕು? ನಿಮಗೆ ಬೇಕಿರುವುದು ಟಿಆರ್ಪಿ, ಟಿಆರ್ಪಿ ಅಷ್ಟೆ. ಆದರೆ ನಾನು ಟಿಆರ್ಪಿ ವಿಷಯವಾಗುವುದಿಲ್ಲ’ ಎಂದಿದ್ದಾರೆ.
17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು
ವಾಸ್ತವವಾಗಿ ಊರ್ವಶಿ ಹಾಗೂ ರಿಷಭ್ ಪಂತ್ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ಈಗ ಇವರ ಮಧ್ಯೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಹೀಗಿರುವಾಗಲೇ ಊರ್ವಶಿ ರೌಟೇಲಾ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ದೆಹಲಿಯ ಹೋಟೆಲ್ನಲ್ಲಿ ಆರ್ಪಿ (ಇಲ್ಲಿ ರಿಷಭ್ ಪಂತ್ ಹೆಸರನ್ನು ನೆರವಾಗಿ ತೆಗೆದುಕೊಳ್ಳದೆ ಕೇವಲ ಆರ್ಪಿ ಎಂಬ ಪದವನ್ನು ಬಳಸಿದ್ದರು) ತನಗಾಗಿ ಕಾಯುತ್ತಿದ್ದರು. ನಾನು ಸತತ 10 ಗಂಟೆ ಶೂಟಿಂಗ್ ಮುಗಿಸಿ ದೆಹಲಿಗೆ ಬರುವಷ್ಟರಲ್ಲಿ ತುಂಬಾ ದಣಿದಿದ್ದೆ. ಹಾಗಾಗಿ ಧಣಿವಾರಿಸಿಕೊಳ್ಳಲು ಹೋಟೆಲ್ ರೂಂ ಗೆ ಹೋಗಿ ಮಲಗಿದ್ದೆ. ಆದರೆ ಆರ್ಪಿ, ನಾನು ತಂಗಿದ್ದ ಹೋಟೆಲ್ನ ಲಾಬಿಯಲ್ಲಿ ನನಗಾಗಿ ಕಾದು ಕುಳಿತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.
ಅಂದಿನಿಂದ ಜನರು ಊರ್ವಶಿ ರಿಷಬ್ ಪಂತ್ ಬಗ್ಗೆಯೇ ಮಾತನಾಡುತ್ತಿದ್ದಾರೆ ಅಂದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪಂತ್ರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ್ದ ಪಂತ್ ಸುಳ್ಳು ಹೇಳುವುದಕ್ಕೂ ಮಿತಿ ಇದೆ ಎಂದು ಪೋಸ್ಟ್ ಹಾಕುವ ಮೂಲಕ ಈ ಇಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ವಾರ್ಗೆ ನಾಂದಿ ಹಾಡಿದ್ದರು.
ಐಪಿಎಲ್ನಲ್ಲೂ ಪಂತ್ ಆಡುವುದಿಲ್ಲ
ಡಿಸೆಂಬರ್ 2022 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಪಂತ್, ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಕಾರು ಅಪಘಾತದ ಬಳಿಕ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಂತ್, 2023ರಲ್ಲಿ ಇಲ್ಲಿಯವರೆಗೆ ಯಾವುದೇ ಪಂದ್ಯವನ್ನು ಆಡಿಲ್ಲ. ಮುಂಬರುವ ಐಪಿಎಲ್ನಲ್ಲೂ ಪಂತ್ ಆಡುವುದಿಲ್ಲ.