ನಾನು ಮಾಡಿದ ಅಭಿವೃದ್ಧಿ ಕೆಲಸ ಮುಂದಕ್ಕೂ ಮುನ್ನಡೆಸಲಿ: ಡಾ.ಸುಧಾಕರ್ ಮನವಿ
ಚಿಕ್ಕಬಳ್ಳಾಪುರ (ಮೇ.15): ಕಳೆದ 10 ವರ್ಷಗಳಿಂದ ಚಿಕ್ಕಬಳ್ಳಾಪುರದ ಜನ ಪ್ರತಿನಿಧಿಯಾಗಿ, ನಿಮ್ಮೆಲ್ಲರ ಮನೆ ಮಗನಾಗಿ ಸಹೋದರನಾಗಿ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಚಿಕ್ಕಬಳ್ಳಾಪುರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಹೆಚ್ಚು ತೃಪ್ತಿ ತರುವಷ್ಟು ಕೆಲಸ ಮಾಡಿದ್ದೇನೆ ಎಂದು ಮಾಜಿ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಾನು ಪಟ್ಟಶ್ರಮದ ಬಗ್ಗೆ, ನನ್ನ ಬದ್ಧತೆಯ ಬಗ್ಗೆ, ನನ್ನ ಕೆಲಸದ ಬಗ್ಗೆ ನನಗೆ ಸಂಪೂರ್ಣಆತ್ಮ ತೃಪ್ತಿ ಇದೆ. ಅದರೂ ಎಲ್ಲೋ ಒಂದು ಕಡೆ ನಿಮ್ಮ ನಿರೀಕ್ಷೆ ತಲುಪಲು ಸಾಧ್ಯವಾಗಿಲ್ಲ ಎಂಬ ಸಂಶಯ ನನಗೆ ಇದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು, ನಿಮ್ಮ ತೀರ್ಪನ್ನು ನಾನು ತಲೆಬಾಗಿ ಸ್ವೀಕರಿಸುತ್ತೇನೆ ಎಂದು ಅವರು ಜನತಾ ತೀರ್ಪನ್ನು ಒಪ್ಪಿಕೊಂಡಿದ್ದಾರೆ.
ಜನತೆ ವಿಶ್ರಾಂತಿ ನೀಡಿದ್ದಾರೆ: ಕಳೆದ ಹತ್ತು ವರ್ಷಗಳಲ್ಲಿ ನನಗೆ ಎಲ್ಲರೀತಿಯ ಪ್ರೀತಿ, ಬೆಂಬಲ, ಸಹಕಾರ ನೀಡಿ ನನ್ನನ್ನು ಆಶೀರ್ವದಿಸಿದ ನಿಮ್ಮ ಪ್ರೀತಿ ಮತ್ತು ಅಭಿಮಾನಗಳಿಗೆ ನಾನು ಎಂದೆಂದೂ ಚಿರಋುಣಿಯಾಗಿದ್ದೇನೆ. ಕೋವಿಡ್ ಆರಂಭದ ಕಾಲದಲ್ಲಿ ರಾಜ್ಯದ ಆರೋಗ್ಯ ಸಚಿವನಾಗಿ, ವೈದ್ಯಕೀಯ ಶಿಕ್ಷಣ ಸಚಿವನಾಗಿ ವಹಿಸಿಕೊಂಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಈ ಜವಾಬ್ದಾರಿಗಳ ಮಧ್ಯೆ ನನ್ನ ಕುಟುಂಬದ ಜೊತೆ ಇರಲು ಸಾಧ್ಯವಾಗಿರಲಿಲ್ಲ. ಈಗ ಕ್ಷೇತ್ರದ ಜನರು ನನಗೆ ಕೆಲ ಸಮಯ ವಿಶ್ರಾಂತಿ ನೀಡಿದ್ಧಾರೆ. ಕೆಲ ಕಾಲ ನನ್ನ ಕುಟುಂಬದ ಜೊತೆ ಕಳೆದು ಮತ್ತೊಮ್ಮೆ ನನ್ನ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸಲು ಮರಳಿ ಬರುತ್ತೇನೆ ಎಂದು ಹೇಳಿದ್ದಾರೆ.
ನೂತನ ಶಾಸಕರಿಗೆ ಅಭಿನಂದಿಸಿದ ಸುಧಾಕರ್: ಈ ಭಾರಿ ಚುನಾವಣೆಯಲ್ಲಿ ಆಯ್ಕೆ ಆಗಿರುವ ಪ್ರದೀಪ್ಈಶ್ವರ್ ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು. ಕಳೆ ಹತ್ತು ವರ್ಷಗಳಿಂದ ಅತ್ಯಂತ ಶ್ರಮಪಟ್ಟು, ಅನೇಕ ಸವಾಲುಗಳನ್ನು ಎದುರಿಸಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ನಾನು ಸಾಕಷ್ಟುಶ್ರಮಿಸಿದ್ದೇನೆ. ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇನ್ನು ಉತ್ತಮವಾದ ಕೆಲಸಗಳನ್ನು ಮಾಡ ಬೇಕೆಂದಿದ್ದೇನೆ. ಆದರೆ ನಾನು ಈವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರದೀಪ್ಈಶ್ವರ್ ಮುಂದುವರೆಸಿಕೊಂಡು ಹೋಗಲಿ ಎಂದು ಡಾ.ಸುಧಾಕರ್ ಸಾಮಾಜಿಕ ಜಾಲ ತಾಣದಲ್ಲಿ ಬರೆದು ಕೊಂಡಿದ್ದು, ಇಂತಿ ನಿಮ್ಮ ಪ್ರೀತಿಯ ಮನೆ ಮಗ ಎಂದು ಅಂತಿಮಗೊಳಿಸಿದ್ದಾರೆ.