ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ದಲ್ಲಿ ಶಾಕಿಂಗ್ ಪಲಿತಾಂಶ ; ಕುಶ್ ನಾಯ್ಕ್ ರಾಜ್ಯಕ್ಕೆ ಪ್ರಥಮ
ಬೆಂಗಳೂರು: ಪಿಯುಸಿ ಮರು ಮೌಲ್ಯಮಾಪನ (PUC re-evaluation) ದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ಮರು ಮೌಲ್ಯ ಮಾಪನದಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿ ಕುಶ್ ನಾಯ್ಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಆ ಮೂಲಕ ಬೆಂಗಳೂರಿನ ಜಯನಗರ ಕಾಲೇಜಿನ ವಿದ್ಯಾರ್ಥಿನಿ ತಬಸುಮ್ ಶೇಖ್ನನ್ನು ಹಿಂದಿಕ್ಕಿದ್ದಾನೆ. ತಬಸುಮ್ ಶೇಖ್ 593 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಆದರೆ ಮರು ಮೌಲ್ಯಮಾಪನದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ವಿಶೇಷ ಚೇತನ ವಿದ್ಯಾರ್ಥಿ ಕುಶ್ ನಾಯ್ಕ್ ದ್ವಿತೀಯ ಪಿಯುಸಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಸತತ 8 ಬಾರಿ ಪ್ರಥಮ ರ್ಯಾಂಕ್ ಪಡೆದ ಕುಟ್ಟೂರು
ಮೌಲ್ಯಮಾಪನ ಫಲಿತಾಂಶದಲ್ಲಿ ಕಲಾ ವಿಭಾಗದ ಐಚ್ಚಿಕ ಕನ್ನಡ ವಿಷಯದಲ್ಲಿ 592 ಅಂಕಗಳಿಂದ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಫಸ್ಟ್ ರಾಂಕ್ ಬಂದಿದ್ದಾರೆ. ಇಂದು ಪಿಯು ಕಾಲೇಜಿನ ಇನೋರ್ವ ವಿದ್ಯಾರ್ಥಿ ಕೃಷ್ಣ ಒಟ್ಟು 593 ಅಂಕಗಳ ಮೂಲಕ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾನೆ. ಈ ಮೂಲಕ ಸತತ ಎಂಟನೇ ಬಾರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿಗೆ ಪ್ರಥಮ ಸ್ಥಾನ ಲಭಿಸಿದೆ.
ಈ ಬಾರಿ ಶೇ.74.64ರಷ್ಟು ವಿದ್ಯಾರ್ಥಿಗಳು ತೇರ್ಗಡೆ
2022–23ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶ ಏಪ್ರಿಲ್ 21 ರಂದು ಪ್ರಕಟವಾಗಿದೆ. ಮಾ. 9ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಈ ಬಾರಿ ಶೇ.74.64ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 61.22%, ವಿಜ್ಞಾನ ವಿಭಾಗದಲ್ಲಿ 85.71%, ವಾಣಿಜ್ಯ ವಿಭಾಗದಲ್ಲಿ 75.89% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮರುಮೌಲ್ಯಮಾಪನಕ್ಕೆ ಅವಕಾಶ
ಈ ಹಿಂದೆ ಮರುಮೌಲ್ಯಮಾಪನದ ನಂತರ ಸುಮಾರು 6 ಅಂಕಗಳು ವ್ಯತ್ಯಾಸವಾಗಿದ್ದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತಿತ್ತು. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಒಂದೆರಡು ಅಂಕಗಳ ವ್ಯತ್ಯಾಸದಿಂದ ಡಿಸ್ಟಿಂಕ್ಷನ್ (85% ಗಿಂತ ಮೇಲೆ) ಕಳೆದುಗೊಂಡಿದ್ದರು. ಆದರೆ ಈ ವರ್ಷದಿಂದ ಪಿಯು ವಿದ್ಯಾರ್ಥಿಗಳು 1 ಅಂಕ ಪಡೆಯಬೇಕಾದರೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿತ್ತು.