ದುಬೈನ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಹೊಂದಿದ್ದ ಐಐಟಿ ಪದವೀಧರ ಪ್ರೇಯಸಿಗಾಗಿ ಕಳ್ಳನಾದ!
ಪಟನಾ: ದುಬೈನಲ್ಲಿನ ದೊಡ್ಡ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಹೊಂದಿದ್ದ ಐಐಟಿ ಪದವೀಧರ, ನೈಟ್ ಕ್ಲಬ್ ಡ್ಯಾನ್ಸರ್ ಆಗಿರುವ ತನ್ನ ಗರ್ಲ್ಫ್ರೆಂಡ್ಗಾಗಿ ಕೆಲಸ ಬಿಟ್ಟುಬಂದು ಕಳ್ಳತನ ಮಾಡಿ ಜೈಲು ಪಾಲಾಗಿದ್ದಾನೆ. ದುಬೈನಲ್ಲಿನ ಕೆಲಸದಲ್ಲಿ ಪ್ರತಿ ತಿಂಗಳು ಒಳ್ಳೆಯ ಸಂಬಳ ಎಣಿಸುತ್ತಿದ್ದ ಈತ, ಈಗ ಬಿಹಾರದ ಮುಜಫ್ಫರ್ಪುರದಲ್ಲಿ ನಿತ್ಯವೂ ಜೈಲು ಕಂಬಿಗಳನ್ನು ಎಣಿಸುತ್ತಿದ್ದಾನೆ.
ಮಹಿಳೆಯೊಬ್ಬರಿಂದ 2.2 ಲಕ್ಷ ರೂ ಕಳವು ಮಾಡಿದ ಆರೋಪದಲ್ಲಿ 40 ವರ್ಷದ ಹೇಮಂತ್ ಕುಮಾರ್ ರಘು ಎಂಬಾತನನ್ನು ಮೂವರು ಸಹಚರರ ಜತೆ ಬಿಹಾರ ಪೊಲೀಸರು ಬಂಧಿಸಿದ್ದಾರೆ. ಶಂಕಿತರಿಂದ ನಗದು ಹಣ, ಶಸ್ತ್ರಾಸ್ತ್ರಗಳು, ಗುಂಡುಗಳು ಹಾಗೂ ಕಳವು ಮಾಡಿದ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ ಪ್ರಕಾರ, ಬಂಧಿತ ರಘು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪೊನ್ನೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ದುಬೈನಲ್ಲಿನ ಬಹು ರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ನೈಟ್ ಕ್ಲಬ್ ನೃತ್ಯಗಾತಿ ಜತೆ ಪ್ರೀತಿಯಲ್ಲಿ ಬಿದ್ದ ಬಳಿಕ ಕೆಲಸ ಬಿಟ್ಟಿದ್ದಾಗಿ ವಿಚಾರಣೆ ವೇಳೆ ರಘು ಹೇಳಿದ್ದಾನೆ.
ತಾನು ದುಬೈನಲ್ಲಿ ನೆಲೆಸಿದ್ದಾಗ ನೈಟ್ ಕ್ಲಬ್ಗಳಲ್ಲಿ ಡ್ಯಾನ್ಸ್ ಮಾಡುವ ಮುಜಫ್ಫರ್ಪುರದ ಯುವತಿ ಪರಿಚಯವಾಗಿತ್ತು. ಆಕೆಯ ಪ್ರೀತಿಯಲ್ಲಿ ಬಿದ್ದಿದ್ದೆ ಎಂದು ಪೊಲೀಸರಿಗೆ ಆತ ತಿಳಿಸಿದ್ದಾನೆ. ಆ ಯುವತಿ ಮೂಡಿಸಿದ್ದ ಹುಚ್ಚು ಎಷ್ಟಿತ್ತೆಂದರೆ, ಆಕೆಗಾಗಿ ರಘು ಏನು ಬೇಕಾದರೂ ಮಾಡಲು ಸಿದ್ಧನಿದ್ದ. ಆಕೆಯ ನೈಟ್ ಕ್ಲಬ್ ಡ್ಯಾನ್ಸ್ ಕೆಲಸವನ್ನು ಒತ್ತಾಯ ಮಾಡಿ ಬಿಡಿಸಿದ್ದ. ಇದಕ್ಕೆ ಪ್ರತಿಯಾಗಿ ಬಿಹಾರದಲ್ಲಿನ ಆಕೆಯ ಊರಿನಲ್ಲಿ ಆಕೆ ಜತೆ ಇರುವುದಾಗಿ ಒಪ್ಪಿಕೊಂಡಿದ್ದ. ಹೀಗೆ ತಾನೂ ದುಬೈನಲ್ಲಿದ್ದ ಒಳ್ಳೆಯ ಕೆಲಸ ಬಿಟ್ಟು ಆಕೆ ಜತೆ ಕಳೆದ ವರ್ಷ ಬಿಹಾರಕ್ಕೆ ಬಂದಿದ್ದ.
ಬಿಹಾರಕ್ಕೆ ಬಂದ ಬಳಿಕ ಗರ್ಲ್ಫ್ರೆಂಡ್ಳನ್ನು ಓಲೈಸಲು, ಆಕೆಯ ಜತೆ ಮಜಾ ಮಾಡಲು ದುಡಿದ ಹಣವನ್ನೆಲ್ಲಾ ಖರ್ಚು ಮಾಡಿದ್ದ. ಆಕೆಗಾಗಿ ತನ್ನ ಸಂಪೂರ್ಣ ಉಳಿತಾಯದ ದುಡ್ಡು ಖಾಲಿಯಾಗಿತ್ತು. ಮುಂದಿನ ದಾರಿ ಕಾಣದೆ ಅಪರಾಧ ಜಗತ್ತಿಗೆ ಕಾಲು ಇರಿಸಿದ್ದಾಗಿ ರಘು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ದುಬೈನಲ್ಲಿ 15 ವರ್ಷ ಕಾಲ ದುಡಿದಿದ್ದ ಈತ, ತನ್ನ ಮೂರ್ಖತನದಿಂದ ಕಳ್ಳತನಕ್ಕೆ ಇಳಿದಿದ್ದ.
ಮದ್ರಾಸ್ ಐಐಟಿ ಪದವೀಧರನಾದ ರಘು, ತನ್ನ ಚಾಣಾಕ್ಷತೆಯನ್ನು ಕುಕೃತ್ಯಗಳಿಗೆ ಬಳಸಿಕೊಂಡಿದ್ದ. ಜಿಲ್ಲೆಯ ಕ್ರಿಮಿನಲ್ಗಳ ಜತೆ ಒಂದು ಜಾಲವನ್ನು ಸೃಷ್ಟಿಸಿದ್ದ. ಸೂಕ್ತವಾದ ಯೋಜನೆ ರೂಪಿಸಿ, ಎಲ್ಲಿ ಹೇಗೆ ಕಳವು ಮಾಡಬೇಕು ಎಂದು ನಿರ್ಧರಿಸುತ್ತಿದ್ದ. ಆತನ ಜಾಲದ ಸದಸ್ಯರು ನಾಜೂಕಾಗಿ ಕಳ್ಳತನ ಮುಗಿಸುತ್ತಿದ್ದರು. ತನ್ನ ಗೆಳತಿಯನ್ನು ಖುಷಿಯಾಗಿ ಇರಿಸುವುದಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾಗಿ ಆತ ತಿಳಿಸಿದ್ದಾನೆ.
“ರಘು ಸ್ಪಷ್ಟವಾಗಿ ವೃತ್ತಿಪರ ಅಪರಾಧಿಯಾಗಿ ಬದಲಾಗಿದ್ದ. ಜಿಲ್ಲೆಯ ಅನೇಕ ಭಾಗಗಳಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ” ಎಂದು ಮುಜಫ್ಫರಪುರ (ಪೂರ್ವ) ಡಿಎಸ್ಪಿ ಮನೋಜ್ ಪಾಂಡೆ ತಿಳಿಸಿದ್ದಾರೆ.
ಪಟ್ಟಣದ ಮಿಥಾನ್ಪುರದಲ್ಲಿ ರಘು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಏಪ್ರಿಲ್ 11ರಂದು ದಾಖಲಾದ ಲೂಟಿ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ರಘುವಿನ ಪಾತ್ರದ ಬಗ್ಗೆ ಸುಳಿವು ಸಿಕ್ಕಿತ್ತು.