ಖಾಲಿ ಕಾಗದಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿ! ವಿಡಿಯೋ ವೈರಲ್

ವಿಲ್ ಮಾಡಿಸುವುದಕ್ಕೋಸ್ಕರ ಸಂಬಂಧಿಗಳು ಖಾಲಿ ಕಾಗದಕ್ಕೆ ಮೃತ ಮಹಿಳೆಯೊಬ್ಬರ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಆಗ್ರಾದಲ್ಲಿ 2021 ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋರ್ಜರಿ ವ್ಹೀಲ್ ಮಾಡುವ ಸಲುವಾಗಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ(Jitendra Sharma), ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ಅಪರಾಧ ಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತ ಮಹಿಳೆ ಕಮಲಾದೇವಿ ಎಂಬುವವರಾಗಿದ್ದು, ಇವರು ಜಿತೇಂದ್ರ ಶರ್ಮಾ ಎಂಬುವವರ ತಾಯಿಯ ಚಿಕ್ಕಮ್ಮನಾಗಿದ್ದು, 2021ರ ಮೇ 8 ರಂದು ಅವರು ಸಾವನ್ನಪ್ಪಿದ್ದರು. ಆಕೆಯ ಪತಿ ಈ ಮೊದಲೇ ಮೃತಪಟ್ಟಿದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ.
ಜಿತೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಕಮಲಾದೇವಿ ಅವರ ಸಾವಿನ ನಂತರ ಅವರ ಭಾವನ ಮಗ( ಪತಿಯ ಅಣ್ಣನ ಮಗ) ಆಕೆಯ ಮೃತದೇಹವನ್ನು ಇವರ ಬಳಿಯಿಂದ ಕಸಿದುಕೊಂಡು ಹೋಗಿದ್ದರು. ಆಗ್ರಾದ ಆಸ್ಪತ್ರೆಗೆ ಕಮಲಾದೇವಿಯವರ ಮೃತದೇಹವನ್ನು ಸಾಗಿಸುತ್ತಿದ್ದಾಗ, ಇನ್ನೇನು ಆಸ್ಪತ್ರೆಗೆ ತಲುಪಲು ಕೆಲ ನಿಮಿಷಗಳಿದ್ದಾಗ ಕಾರನ್ನು ಅಡ್ಡ ಹಾಕಿದ ಅವರು ವಕೀಲರೊಬ್ಬರನ್ನು ಕರೆಸಿ ನಕಲಿ ವಿಲ್ ಮಾಡುವುದಕ್ಕಾಗಿ ಕಮಲಾದೇವಿಯವರ ಹೆಬ್ಬೆಟ್ಟು ಪಡೆದಿದ್ದರು.
ನಂತರ ಈ ನಕಲಿ ವಿಲ್ ಬಳಸಿಕೊಂಡು ಕಮಲಾದೇವಿ ಪತಿ ಕಡೆಯ ಸಂಬಂಧಿಕರು ಕಮಲಾದೇವಿಯವರಿಗೆ (Kamala Devi)ಸೇರಿದ್ದ ಆಸ್ತಿ ಹಾಗೂ ಅಂಗಡಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಆದರೆ ಸುಶಿಕ್ಷಿತರಾಗಿದ್ದ ಕಮಲಾದೇವಿಯವರು ಎಲ್ಲೂ ಹೆಬ್ಬೆಟ್ಟು ಹಾಕುತ್ತಿರಲಿಲ್ಲ ಅವರು ತಮ್ಮ ಸಹಿಯನ್ನೇ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಶರ್ಮಾ ಅವರಿಗೆ ಈ ಬಗ್ಗೆ ವಿಲ್ (fake will) ಬಗ್ಗೆ ಸಂಶಯ ಬಂದಿತ್ತು. ಆದರೆ ಇತ್ತೀಚೆಗೆ 45 ಸೆಕೆಂಡ್ಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಕಾರೊಂದರ ಹಿಂಬದಿ ಸೀಟಿನಲ್ಲಿ ಕಮಲಾದೇವಿ ಮೃತದೇಹವಿದ್ದು, ಆರೋಪಿಗಳು ವಕೀಲರೊಬ್ಬರ ನೆರವಿನಿಂದ ಅವರ ಕೈಯಿಂದ ಖಾಲಿ ಕಾಗದಗಳಿಗೆ ಹೆಬ್ಬೆಟ್ಟು ಸಹಿ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಆಗಿದ್ದು, ಜಿತೇಂದ್ರ ಶರ್ಮಾ ಅವರ ಅನುಮಾನಕ್ಕೆ ಪುರಾವೆ ಸಿಕ್ಕಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಗ್ರಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ವರ್ತನೆ. ಇಂತಹವರಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ಕೆಲವರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂತಹ ಕೃತ್ಯವನ್ನು ಬೆಂಬಲಿಸಿದ ವಕೀಲನ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಎಂಥಾ ಕಾಲ ಬಂತು ನೋಡಿ ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೇ ಎಂಬ ಗಾದೆ ಮಾತೊಂದಿತ್ತು. ಆದರೆ ಈಗ ಆಸ್ತಿಗಾಗಿ ಹೆಣವನ್ನು ಕೂಡ ನೆಮ್ಮದಿಯಾಗಿರಲು ಕೆಲವು ದುಷ್ಟರು ಬಿಡುವುದಿಲ್ಲ ಎಂಬುದು ಈ ವಿಚಾರದಿಂದ ಸಾಬೀತಾಗಿರುವುದಂತೂ ನಿಜ.