ಹೊಸದಿಲ್ಲಿ: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಗುಂಪೊಂದು ದಾಳಿ ನಡೆಸಿದೆ. ಸೋಮವಾರ ಸಂಜೆ ಕತ್ತಿಗಳನ್ನು ಹಿಡಿದ ಜನರ ಗುಂಪೊಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಜೈಲಿಗೆ ವಾಪಸ್ ಕರೆದೊಯ್ಯುತ್ತಿರುವಾಗ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದು, ಅಫ್ತಾಬ್ನ ರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಫ್ತಾಬ್ ಪೂನಾವಾಲಾಗೆ ಎರಡನೇ ಬಾರಿ ಪಾಲಿಗ್ರಾಫ್ ಪರೀಕ್ಷೆಯನ್ನು ಸೋಮವಾರ ನಡೆಸಲಾಯಿತು. ಅದಕ್ಕಾಗಿ ಆರೋಪಿ ಅಫ್ತಾಬ್ ಅನ್ನು ಪಶ್ಚಿಮ ದಿಲ್ಲಿಯಲ್ಲಿರುವ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಪರೀಕ್ಷೆಯ ಬಳಿಕ ಅಫ್ತಾಬ್ ಅನ್ನು ಜೈಲಿಗೆ ಕರೆದೊಯ್ಯುವ ವೇಳೆ ಎಫ್ಎಸ್ಎಲ್ ಕಟ್ಟಡದ ಹೊರಗಡೆ ಪೊಲೀಸರ ವಾಹನ ಬರುತ್ತಿದ್ದಂತೆ ಕತ್ತಿಯಿಡಿದ ಜನರ ಗುಂಪು ದಾಳಿ ನಡೆಸಿದೆ.
ಕತ್ತಿ ಹಿಡಿದಿದ್ದ ಹದಿನೈದು ಮಂದಿಯ ಗುಂಪು ಪೊಲೀಸ್ ವಾಹನದ ಮೇಲೆ ಹತ್ತಿತ್ತು. ಆ ವ್ಯಕ್ತಿಗಳು ಅಫ್ತಾಬ್ನನ್ನು ಹುಡುಕುತ್ತಿದ್ದರು, ಅವರೆಲ್ಲಾ ಬಲಪಂಥೀಯ ಗುಂಪಿನ ಭಾಗವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಫ್ತಾಬ್ ಪೂನಾವಾಲಾ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಕೆಲವು ದಾಳಿಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬರು ದಾಳಿಕೋರರನ್ನು ಓಡಿಸಲು ವಾಹನದಿಂದ ಹೊರಬಂದಿರುವುದನ್ನು ಕಾಣಬಹುದು. ಆದರೆ, ದಾಳಿಕೋರರು ವಾಹನದ ಮೇಲೆ ದಾಳಿ ಮುಂದುವರಿಸಿದಾಗ ಪೊಲೀಸ್ ತಮ್ಮ ಪಿಸ್ತೂಲ್ ಅನ್ನು ಹೊರಗೆ ತೆಗೆದು ವಾಹನ ಮುಂದೆ ಸಾಗುವಂತೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?