ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದಲೇ ಸ್ಪರ್ಧಿಸುವ ಇಂಗಿತವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ ಎಂದಿರುವ ಪ್ರಮೋದ್ ಮುತಾಲಿಕ್, ಈ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡುವಂತೆ ಸಚಿವ ಸುನೀಲ್ ಕುಮಾರ್ಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಕಾರ್ಕಳದಲ್ಲಿ ಮಾತನಾಡಿರುವ ಅವರು, ನಾನು ಕಾರ್ಕಳದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ ಎಂದರು.
ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ. ಆದ್ದರಿಂದ ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ನನಗೆ ಅವಕಾಶ ಮಾಡಿಕೊಡಿ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದು, ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ನಿಮ್ಮ ಕ್ಷೇತ್ರ ತ್ಯಾಗ ಮಾಡಿ, ಬೇರೆ ಕಡೆ ಎಲ್ಲಾದರೂ ನೀವು ಚುನಾವಣೆಗೆ ಸ್ಪರ್ಧಿಸಿ. ನಿಮ್ಮಲ್ಲಿ ನಿಜವಾಗಿ ಹಿಂದುತ್ವ, ಆರ್ಎಸ್ಎಸ್ ನಿಷ್ಠೆ ಇದ್ದರೆ ಕ್ಷೇತ್ರ ತ್ಯಾಗ ಮಾಡಿ. ನಾನು ಹಿಂದುತ್ವ ಏನೆಂದು ತೋರಿಸುತ್ತೇನೆ ಎಂದು ಹೇಳಿದರು.
ಈಗ ನನಗೆ ನಿಮ್ಮ ಕಾರ್ಕಳ ಕ್ಷೇತ್ರ ಬಿಟ್ಟುಕೊಡಿ, ಐದು ವರ್ಷದ ಬಳಿಕ ಮತ್ತೆ ನಿಮ್ಮನ್ನು ನಿಲ್ಲಿಸುತ್ತೇನೆ. ಯಾವ ದಾರಿಯಲ್ಲಿ ನಡೆಯಬೇಕೆಂದು ನಾನು ತೋರಿಸಿಕೊಡುತ್ತೇನೆ. ಈಗ ನಡೆದದ್ದು ಮತ್ತು ಗಳಿಸಿದ್ದು ಸಾಕು, ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು ಎಂದು ಸುನೀಲ್ ಕುಮಾರ್ ವಿರುದ್ಧ ಗುಡುಗಿದ ಮುತಾಲಿಕ್, ಹಿಂದೂಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿದರು.
ತಲವಾರು ಹಿಡಿದುಕೊಂಡು ಬಂದವರ ಮುಂದೆ ಹೋರಾಟ ಮಾಡಿದವನು ನಾನು, ಭಯಾನಕವಾದ ತುರ್ತುಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಗಂಡುಗಲಿ ನಾನು. ಫೋನ್ ಮಾಡಿಸಿ ನನಗೆ ಭಯಪಡಿಸುವ ಚಿಲ್ಲರೆ ಕೆಲಸ ಮಾಡಬೇಡಿ. ಹಿಂದುತ್ವದ ವೇದಿಕೆಯಲ್ಲಿ ಇಬ್ಬರು ನಿಂತು ಚರ್ಚೆ ಮಾಡೋಣ. ಚರ್ಚೆಗೆ ಬರುವ ತಾಕತ್ತಿದೆಯಾ ನಿಮಗೆ? ಎಂದು ಸವಾಲು ಹಾಕಿದ ಮುತಾಲಿಕ್, ನಿಮ್ಮ ದುಡ್ಡು ಅಹಂಕಾರ, ಸೊಕ್ಕು, ದರ್ಪ ಇವೆಲ್ಲವನ್ನೂ ಬಿಟ್ಟು ಬಿಡಿ. ಕಾರ್ಯಕರ್ತರನ್ನು ಹೆದರಿಸುತ್ತಾರೆ ಅಂದರೆ ಹತ್ತು ಪಟ್ಟು ಜನ ನನ್ನ ಜೊತೆ ಬರುತ್ತಾರೆ ಅಂತ ಎಚ್ಚರಿಸಿದ್ದಾರೆ.
ಬಿಜೆಪಿಯದು ಡೊಂಗಿ ಹಿಂದುತ್ವ ಎನ್ನುವ ಪ್ರಮೋದ್ ಮುತಾಲಿಕ್ ಅವರು ಚುನಾವಣೆಗೆ ಸ್ಪರ್ಧಿಸಿದಲ್ಲಿ, ಕಾರ್ಕಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಫಲಿತಾಂಶದಲ್ಲಿ ಉತ್ತರ ಕೊಡುತ್ತಾರೆ. ಸಚಿವ ಸುನೀಲ್ ಕುಮಾರ್ ಪ್ರಖರ ಹಿಂದುತ್ವವಾದಿಯಾಗಿದ್ದು, ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಕಾರ್ಕಳವನ್ನು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಇರಿಸಿದ್ದಾರೆ. ಮುತಾಲಿಕ್ ಅವರ ಬಗ್ಗೆ ಗೌರವ ಇದೆ. ಇದು ಖಂಡಿತ ಅವರ ತೀರ್ಮಾನವಲ್ಲ, ಕೆಲ ವಿಘ್ನ ಸಂತೋಷಿಗಳು, ಗೊಂದಲ ಸೃಷ್ಟಿಸಲು ಅವರನ್ನು ಅಭ್ಯರ್ಥಿಯಾಗಿ ಬಿಂಬಿಸಲು ಹೊರಟಿದ್ದಾರೆ ಎಂದರು.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?