ಉಲ್ಟಾ ಹೊಡೆದ ಗುತ್ತಿಗೆದಾರ; ಡಿಕೆ ಶಿವಕುಮಾರ್ ಅವರು ಕಮಿಷನ್ ಕೇಳಿಲ್ಲ..!

ಬೆಂಗಳೂರು: ಕಾಮಗಾರಿ ಬಿಲ್ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಷನ್ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಸೋಮವಾರ ಮಾತು ಬದಲಿಸಿದ್ದಾರೆ.
ದಕ್ಷ ಮತ್ತು ಸ್ಚಚ್ಛ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ಹಿಂದಿನವರ ದಾರಿ ಹಿಡಿಯಿತೇ ಎಂಬ ಜನಾಭಿಪ್ರಾಯ ರೂಪುಗೊಳ್ಳುವ ಆತಂಕದಲ್ಲಿದ್ದ ಸರಕಾರಕ್ಕೆ ಈ ಬೆಳವಣಿಗೆ ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ಮತ್ತೊಂದೆಡೆ, ಕಮಿಷನ್ ವಿಚಾರವನ್ನೇ ಅಸ್ತ್ರವಾಗಿಸಿಕೊಂಡು ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗಿದ್ದ ಪ್ರತಿಪಕ್ಷ ಬಿಜೆಪಿಗೆ ನಿರುತ್ಸಾಹ ತಂದಿದೆ.
”ಬಿಲ್ ಪಾವತಿಗೆ ಕಮಿಷನ್ ಕೇಳಿಲ್ಲಎಂದಾದರೆ ಡಿ.ಕೆ.ಶಿವಕುಮಾರ್ ಅವರು ತಾವು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಲಿ. ನಾನು ದುಡ್ಡು ಕೇಳಿದ್ದಾರೆಂದು ಪ್ರಮಾಣ ಮಾಡುತ್ತೇನೆ,” ಎಂದು ಹೇಮಂತ್ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಪಕ್ಷದ ಅಧ್ಯಕ್ಷರ ವಿರುದ್ಧವೇ ಕೇಳಿಬಂದ ಈ ಆರೋಪ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸುವ ಜತೆಗೆ, ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ತಳಮಳ ಸೃಷ್ಟಿಸಿತ್ತು.
ಆದರೆ, ಸೋಮವಾರ ಮಾದ್ಯಮಗಳ ಮುಂದೆ ಬಂದಿರುವ ಗುತ್ತಿಗೆದಾರ ಹೇಮಂತ್ ತಮ್ಮ ಆರೋಪ ಹಿಂಪಡೆದಿರುವುದು ಕುತೂಹಲ ಮೂಡಿಸಿದೆ. ”ಡಿ.ಕೆ.ಶಿವಕುಮಾರ್ ಅವರು ನನ್ನ ಬಳಿ ಕಮಿಷನ್ ಕೇಳಿಲ್ಲ. ಭಾವೋದ್ವೇಗಕ್ಕೆ ಒಳಗಾಗಿ ಆ ರೀತಿ ಮಾತನಾಡಿದ್ದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರ ಭಾವನೆಗೆ ಘಾಸಿಯಾಗಿದ್ದು, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಹೇಮಂತ್ ಸುದ್ದಿಗೋಷ್ಠಿಯಲ್ಲಿ ತಪ್ಪೊಪ್ಪಿಗೆಯ ಹೇಳಿಕೆ ನೀಡಿದರು.
”ನಾನು ಭಾವುಕನಾಗಿ ಆ ರೀತಿ ಮಾತನಾಡಿದೆ. ಇದನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿಸಿಕೊಂಡು ಅಜ್ಜಯ್ಯನ ಮಠದಲ್ಲಿಪ್ರಮಾಣ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುವುದು ಸರಿಯಲ್ಲ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ನಾನು ಸಣ್ಣವನು. ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಿದ್ದೇನೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರಲ್ಲಿಕ್ಷಮೆ ಕೋರುತ್ತೇನೆ. ತನಿಖಾ ವರದಿ ಬಳಿಕವೇ ಬಿಲ್ ಪಾವತಿ ಮಾಡಲಿ. ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪ್ರತಿಪಕ್ಷ ಬಿಜೆಪಿಯವರು ಗುತ್ತಿಗೆದಾರರ ಬಾಕಿ ಬಿಲ್ ಕೊಡಿಸಲು ನೆರವಾಗಲಿ,” ಎಂದರು.
ಬಿಜೆಪಿ ನಾಯಕರೇ ಉತ್ತರ ಕೊಡಿ: ಡಿಕೆಶಿ
ಗುತ್ತಿಗೆದಾರರು ಕಮಿಷನ್ ಆರೋಪ ಹಿಂಪಡೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ”ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಿ ಎಂದಿದ್ದ ಗುತ್ತಿಗೆದಾರ ಹೇಮಂತ್ ಮತ್ತಿತರರು ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ. ಗುತ್ತಿಗೆದಾರರು ನೋವಿನಲ್ಲಿದ್ದು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅವರನ್ನು ಬಳಸಿಕೊಂಡ ಸಾಮ್ರಾಟ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಈಗ ಏನು ಹೇಳುತ್ತಾರೆ? ಉತ್ತರ ಕೊಡಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದರು.
ದಾಖಲೆ ಬಿಡುಗಡೆ
ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲೂಈ ಕುರಿತು ಪ್ರಸ್ತಾಪಿಸಿದ ಡಿಸಿಎಂ, ”ಬಿಜೆಪಿ ಸರ್ಕಾರದ ಅವಧಿಯ ಅಕ್ರಮ ಮತ್ತು ನಕಲಿ ಕಾಮಗಾರಿಗಳ ಬಗ್ಗೆ ಅಘಾತಕಾರಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸಿಎಂ ಕೂಡ ಮಾತನಾಡಲು ಹೇಳಿದ್ದರು. ಆದರೆ, ಬಿಬಿಎಂಪಿ ಬೆಂಕಿ ದುರಂತ ಮತ್ತಿತರ ಕಾರ್ಯ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ಮುಗಿಯಲಿ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ” ಎಂದು ಗುಡುಗಿದರು.
”ನಮ್ಮ ಅಜ್ಜಯ್ಯನ ಸಹವಾಸ ಏನು ಎಂದು ಅವರಿಗೆಲ್ಲಾ ಗೊತ್ತಿಲ್ಲ. ನಾನೀಗ ತಕ್ಷಣಕ್ಕೆ ಉತ್ತರ ನೀಡಲು ಹೋಗುವುದಿಲ್ಲ. ನಮಗೆ ನವರಂಗಿದು, ಚಕ್ರವರ್ತಿದು ಎಲ್ಲರದ್ದೂ ಗೊತ್ತಿದೆ. ಎಲ್ಲವನ್ನು ಒಮ್ಮೆಗೆ ಬಿಟ್ಟರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ನಾನು ರಾಜ್ಯದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಹೊಂದಿದ್ದೇನೆ. ಅದನ್ನು ಮಾಡುತ್ತೇನೆ” ಎಂದರು.