ಇಂದಿನಿಂದ ಗೃಹಜ್ಯೋತಿ ಜಾರಿ; ಅನ್ನ ಭಾಗ್ಯಕ್ಕೂ ಸಿದ್ಧತೆ - ಗೃಹಜ್ಯೋತಿಯನ್ನು ನೊಂದಣಿ ಮಾಡುವುದು ಹೇಗೆ? ಇಲ್ಲಿದೆ ಅಪ್ಡೇಟ್ಸ್
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ‘ಶಕ್ತಿ’ ಯಶಸ್ವಿಯಾಗಿ ಜಾರಿಗೆ ಬಂದ ಬೆನ್ನ ಹಿಂದೆಯೇ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಹಾಗೂ ‘ಗೃಹಜ್ಯೋತಿ’ ಯೋಜನೆಗಳನ್ನು ಇಂದಿನಿಂದ (ಜು.1) ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಲಾಗಿದೆ.ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಅನುಷ್ಠಾನಕ್ಕೆ ಬರುತ್ತಿರುವುದು ವಿಶೇಷ. ಹಾಗೆಯೇ ಯೋಜನೆಗೆ ಎದುರಾದ ಅನಿರೀಕ್ಷಿತ ಸವಾಲುಗಳನ್ನು ಒಂದೊಂದಾಗಿ ಬದಿಗೆ ಸರಿಸಿ ಜನರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಯತ್ನ ನಡೆಸಿರುವುದೂ ಸ್ಪಷ್ಟವಾಗಿದೆ.ಜುಲೈ 3ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಹೋರಾಟಕ್ಕೆ ಸಜ್ಜಾಗಿದೆ. ಈ ನಡುವೆ ಸರ್ಕಾರ ಯೋಜನೆಗೆ ಚಾಲನೆ ಕೊಡುವ ಮೂಲಕ ಹೋರಾಟದ ತೀವ್ರತೆ ಕುಗ್ಗುವಂತೆ ಮಾಡುತ್ತಿದೆ.
ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಎಲ್ ಕಾರ್ಡ್ದಾರರ ಖಾತೆಗೆ ಹಣ ಜಮಾ ಆಗಲಿದೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾತು ಕೊಟ್ಟಂತೆ ಜುಲೈ 1ರಿಂದ ಯೋಜನೆ ಜಾರಿಯಾಗಲಿದೆ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದಿದ್ದಾರೆ.
ಗೃಹಜ್ಯೋತಿ ಜಾರಿ ಸಿದ್ಧತೆ
ಪ್ರತಿ ತಿಂಗಳು 200 ಯೂನಿಟ್ವರೆಗೆ ಮನೆ ಬಳಕೆಗೆ ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಲಾಗು ಆಗಲಿದೆ. ಈ ಯೋಜನೆಯ ಫಲಾನುಭವಿಗಳಾಗಲು ಜೂ.18ರಂದು ಆನ್ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆರಂಭಿಕ ದಿನಗಳಲ್ಲಿ ಹಲವು ಗೊಂದಲಗಳಿದ್ದು ಅದನ್ನು ಸರಿಪಡಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆದಿದೆ. ನೋಂದಾಯಿತ ಅರ್ಹರಿಗೆ ಆಗಸ್ಟ್ ತಿಂಗಳಿನಲ್ಲಿ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ವಿದ್ಯುತ್ ಬಳಕೆ ಮಿತಿ ದಾಟಿದರೆ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್ಗೆ ಮಾತ್ರ ಶುಲ್ಕ ಕಟ್ಟಬೇಕಾಗುತ್ತದೆ. 200 ಯೂನಿಟ್ ದಾಟಿದರೆ ಪೂರ್ಣ 200 ಯೂನಿಟ್ಗೆ ಬಿಲ್ ಕಟ್ಟಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿರುವವರಿಗೂ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
6 ಲಕ್ಷ ಕಾರ್ಡಗಳಷ್ಟೇ ಬಾಕಿ
- ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಕಾರ್ಡ್ದಾರರು
- ಒಟ್ಟು 4 ಕೋಟಿ 42 ಲಕ್ಷ ಫಲಾನುಭವಿಗಳು
- ಶೇ.99ರಷ್ಟು ಆಧಾರ್ ಕಾರ್ಡ್ ಜೋಡಣೆ ಆಗಿದೆ
- 1.22 ಕೋಟಿ ಕಾರ್ಡ್ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ
- ಬಾಕಿ ಉಳಿದಿರುವ 6 ಲಕ್ಷ ಕಾರ್ಡ್ಗಳು ಆಧಾರ್ ಲಿಂಕ್ ಆಗಬೇಕು
- ಆಧಾರ್ ಲಿಂಕ್ ಆಗುತ್ತಿದ್ದಂತೆ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ಗಳಿಗೆ ಅಪ್ಡೇಟ್ ಆಗಲಿದೆ.
2.14 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್
- ಈವರೆಗೆ 80,99,932 ಮಂದಿ ಅರ್ಜಿ ಸಲ್ಲಿಸಿದ್ದಾರೆ. ನೋಂದಣಿಗೆ ಸದ್ಯಕ್ಕೆ ಕಾಲಮಿತಿ ಹಾಕಿಲ್ಲ.
- 2.16 ಕೋಟಿ ಪೈಕಿ 2.14 ಕೋಟಿ ಕುಟುಂಬಗಳಿಗೆ ಇದರ ಲಾಭ
- ಶೇ.10 ರಷ್ಟು ಗ್ರಾಹಕರು ಮಾತ್ರ ಸರಾಸರಿ 200 ಯೂನಿಟ್ಗಿಂತ ಹೆಚ್ಚು ಬಳಸುತ್ತಿದ್ದಾರೆ.
- https://sevasindhugs.karnataka.gov.in ಈ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
- ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಎಸ್ಕಾಂ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ
- ನೋಂದಣಿಗೆ ಮೊಬೈಲ್ ನಂಬರ್, ಆಧಾರ್ ನಂಬರ್, ಗ್ರಾಹಕರ ಐಡಿ ಕಡ್ಡಾಯ
ಪ್ರತಿಯೊಬ್ಬರಿಗೆ 170 ರೂ.
ಫಲಾನುಭವಿಗಳಿಗೆ ತಲುಪಿಸಬೇಕಾದ ಹಣವನ್ನು ಶನಿವಾರದಿಂದಲೇ ಹಂತಹಂತವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ. ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಮಾತ್ರ ಹಣ ನೀಡುತ್ತೇವೆ. ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡಲಾಗುವುದು. ಎಷ್ಟು ತಿಂಗಳು ಅಕ್ಕಿ ಬದಲಿಗೆ ಹಣ ನೀಡಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಇದು ಅಕ್ಕಿ ಪೂರೈಕೆಯಾಗದ ಕಾರಣ ತಾತ್ಕಾಲಿಕ ವ್ಯವಸ್ಥೆ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಬಿಪಿಎಲ್ ಕಾರ್ಡ್ದಾರರ ಪೈಕಿ ಶೇ.90ರಷ್ಟು ಮಂದಿಯ ಬ್ಯಾಂಕ್ ಖಾತೆ ಇರುವ ಮಾಹಿತಿ ನಮ್ಮಲ್ಲಿದೆ. ಒಬ್ಬರಿಗೆ ಐದು ಕೆಜಿಯಂತೆ 170 ರೂಪಾಯಿ ಕೊಡುತ್ತೇವೆ ಎಂದು ಹೇಳಿದರು. ಸಿಎಂ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಬಲ ಬೆಲೆ ನೀಡಿ ಖರೀದಿ: ಮುಂದಿನ ದಿನಗಳಲ್ಲಿ ಬೆಂಬಲ ಬೆಲೆ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುವ ಉದ್ದೇಶವಿದೆ. ತಕ್ಷಣಕ್ಕೆ ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.