ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ!
ಉತ್ತರ ಪ್ರದೇಶದ (Uttar Pradesh) ಪಸ್ಮಾಂಡ ಮುಸ್ಲಿಂ ಸಮುದಾಯದ ತಾರಿಕ್ ಮನ್ಸೂರ್ ಜೆಎನ್ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದ್ದಾರೆ. 1982ರಲ್ಲಿ ಅದೇ ಕಾಲೇಜಿನಲ್ಲೇ ಎಂಎಸ್ ಓದಿದ್ದರು. ಉತ್ತರ ಪ್ರದೇಶ ವಿಧಾನ ಪರಿಷತ್ನ ಬಿಜೆಪಿ ಸದಸ್ಯರಾಗಿರುವ ಮನ್ಸೂರ್ ಈ ವರ್ಷ ಉಪಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
2017ರ ಮೇ 17 ರಂದು ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರ ಅಧಿಕಾರ ಅವಧಿ ಮೇ 2022ಕ್ಕೆ ಕೊನೆಯಾಗಬೇಕಿತ್ತು. ಆದರೆ ಕೋವಿಡ್ ಇತ್ಯಾದಿ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಇವರ ಅಧಿಕಾರ ಅವಧಿಯನ್ನು 1 ವರ್ಷ ವಿಸ್ತರಿಸಿತ್ತು.
ಉತ್ತರ ಪ್ರದೇಶದ ಮತದಾರರ ಪೈಕಿ ಸರಿಸುಮಾರು 19% ರಷ್ಟು ಮುಸ್ಲಿಂ ಮತದಾರರಿದ್ದಾರೆ. ಕನಿಷ್ಠ 30 ಲೋಕಸಭಾ ಸ್ಥಾನಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿರುವ ಮುಸ್ಲಿಮರು ಈ ಪೈಕಿ 15 ರಿಂದ 20 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಎಎಂಯು ಉಪ ಕುಲಾಪತಿಯಾಗುವ ಮೊದಲು ತಾರಿಕ್ ಮನ್ಸೂರ್ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಎಎಂಯುನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಸುಮಾರು ನಾಲ್ಕು ದಶಕಗಳ ಬೋಧನೆ, ಸಂಶೋಧನೆ, ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.
ಮನ್ಸೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಪದ್ಮ ಪ್ರಶಸ್ತಿ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು. ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಲಕ್ನೋ), ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ (ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ) ಮತ್ತು ಶಿಕ್ಷಣ ಸಚಿವಾಲಯದ ಅಲ್ಪಸಂಖ್ಯಾತರ ಶಿಕ್ಷಣದ ರಾಷ್ಟ್ರೀಯ ಮೇಲ್ವಿಚಾರಣಾ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಉತ್ತರ ಅಮೆರಿಕ ಯುರೋಪ್, ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಪ್ರಮುಖ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ತಾರಿಕ್ ಮನ್ಸೂರ್ ಭೇಟಿ ನೀಡಿದ್ದಾರೆ.
ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಜಮಾಲ್ ಸಿದ್ದಿಕಿ ಪ್ರತಿಕ್ರಿಯಿಸಿ, ಮನ್ಸೂರ್ ಅವರು ರಾಷ್ಟ್ರೀಯ ಮುಸ್ಲಿಂ ಆಗಿದ್ದು, ಅವರು ಯಾವಾಗಲೂ “ದೇಶ ಮೊದಲು” ಎಂಬ ಆದರ್ಶವನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಎಎಂಯು ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ (AK Antony) ಅವರ ಪುತ್ರ ಅನಿಲ್ ಆಂಟನಿ (Anil Antony) ಅವರಿಗೂ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದೆ. ಕೇರಳದ ಕಾಂಗ್ರೆಸ್ (Kerala Congress) ನಾಯಕರಾಗಿದ್ದ ಅನಿಲ್ ಆಂಟನಿ ಅವರು 2002ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ (Narendra Modi) ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ (BBC Documentary) ವಿವಾದದ ನಂತರ ಜನವರಿಯಲ್ಲಿ ಪಕ್ಷವನ್ನು ತೊರೆದಿದ್ದರು.