ಬೈಕ್ಗೆ ಡಿಕ್ಕಿ ಬಳಿಕ 12 ಕಿ.ಮೀ. ದೇಹ ಎಳೆದೊಯ್ದ ಕಾರು: ಗುಜರಾತ್ನಲ್ಲಿ ಭೀಕರ ಘಟನೆ
ಸೂರತ್ (ಜನವರಿ 25, 2023): ಕಾರು- ಬೈಕ್ ಡಿಕ್ಕಿ ಬಳಿಕ, ಚಕ್ರಕ್ಕೆ ಸಿಕ್ಕಿಬಿದ್ದಿದ್ದ ಬೈಕ್ ಸವಾರನನ್ನು ಕಾರು ಚಾಲಕ ಅದೇ ಸ್ಥಿತಿಯಲ್ಲಿ 12 ಕಿ.ಮೀ ಎಳೆದೊಯ್ದ ಭೀಕರ ಘಟನೆಯೊಂದು ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಬೈಕ್ ಸವಾರ ಮೃತ ಪಟ್ಟಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ. ಈ ಘಟನೆ ಇತ್ತೀಚೆಗೆ ದೆಹಲಿ, ಬೆಂಗಳೂರು ಮತ್ತು ದಿಲ್ಲಿಯಲ್ಲಿ ನಡೆದ ಘಟನೆಯನ್ನು ನೆನಪಿಸಿದೆ. ಜನವರಿ 18ರಂದು ಸಾಗರ್ ಪಾಟೀಲ್ ಎಂಬ ವ್ಯಕ್ತಿ ಪತ್ನಿಯೊಂದಿಗೆ ಕಡೋದರಾ-ಬರ್ಡೋಲಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಬಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಹಿಂಬದಿ ಕುಳಿತಿದ್ದ ಸಾಗರ್ನ ಪತ್ನಿ ಕೆಳಗೆ ಉರುಳಿಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಘಟನೆ ಬಳಿಕ ಸಾಗರ್ನ ಸುಳಿವು ಸಿಕ್ಕಿರಲಿಲ್ಲ. ಆದರೆ ಮಾರನೇ ದಿನ 12 ಕಿ.ಮೀ ದೂರದಲ್ಲಿ ಛಿದ್ರಗೊಂಡಿದ್ದ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿತ್ತು. ಪರಿಶೀಲನೆ ಬಳಿಕ ಅದು ಸಾಗರ್ ಪಾಟೀಲ್ ಶವವೆಂದು ಖಚಿತಪಟ್ಟಿದೆ.
ಕಾರಿನ ಚಕ್ರಕ್ಕೆ ಶವ ಸಿಕ್ಕಿರುವ ದೃಶ್ಯವನ್ನು ಬೈಕ್ ಸವಾರನೊಬ್ಬ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಇತ್ತೀಚೆಗೆ ಪೊಲೀಸರಿಗೆ ರವಾನಿಸಿದ್ದಾರೆ. ಈತ ಆ ವಾಹನದ ಹಿಂದೆಯೇ ಇದ್ದ ಎಂದು ಹೇಲಲಾಗಿದ್ದು, ಅದಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್ ವಿಡಿಯೋ ಆಧಾರದಲ್ಲಿ ಕಾರಿನ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ವಿಡಿಯೋ ದೆಹಲಿಯ ಕಾಂಜಾವಾಲಾ ಡ್ರ್ಯಾಗ್ ಕೇಸ್ಗೆ ಮರುಜೀವ ನೀಡಿದೆ.
ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಬೈಕ್ ಸವಾರ ತನ್ನ ಪತ್ನಿಯೊಂದಿಗೆ ಜನವರಿ 18 ರ ರಾತ್ರಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ. ಮೃತಪಟ್ಟ ಸಂತ್ರಸ್ಥನನ್ನು ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಹಿಂದಿನ ಸೀಟಿನಲ್ಲಿದ್ದಾಗ ಬೈಕ್ ಚಲಾಯಿಸುತ್ತಿದ್ದಾಗ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದೆ ಎಂದು ಮಂಗಳವಾರ ತಿಳಿಸಿದ್ದಾರೆ. ಅಲ್ಲದೆ, ವಾಹನವನ್ನು ಗುರುತಿಸಲು ಪೊಲೀಸರಿಗೆ ಸಹಾಯ ಮಾಡಿದ ನಾಗರಿಕರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಕಾರಿನ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಕಾರಿನ ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದೂ ಅವರು ಹೇಳಿದರು.
ಸಂತ್ರಸ್ತ ಸಾಗರ್ ಪಾಟೀಲ್ ಕಳೆದ ಬುಧವಾರ ರಾತ್ರಿ ತನ್ನ ಪತ್ನಿ ಅಶ್ವಿನಿಬೆನ್ ಅವರನ್ನು ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದರೂ ಚಾಲಕ ನಿಲ್ಲಿಸದೆ ವಾಹನ ಚಲಾಯಿಸುತ್ತಲೇ ಇದ್ದ ಎಂದು ತಿಳಿದುಬಂದಿದೆ. ಈ ವೇಳೆ ಮಹಿಳೆ ಕೆಳಕ್ಕೆ ಬಿದ್ದಿದ್ದು, ನಂತರ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸಾಗರ್ ಪಾಟೀಲ್ ಸ್ಥಳದಲ್ಲಿ ಪತ್ತೆಯಾಗಿರಲಿಲ್ಲ ಎಂದು ಸೂರತ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜೋಯ್ಸರ್ ಹೇಳಿದರು.
ಕಮ್ರೇಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ ಸ್ಥಳದಿಂದ 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ತಡರಾತ್ರಿ (ಘಟನೆಯ ಗಂಟೆಗಳ ನಂತರ) ಮೃತದೇಹ ಪತ್ತೆಯಾಗಿದೆ. ಮೃತದೇಹ ಪಾಟೀಲ್ ಅವರದ್ದು ಎಂದು ತಿಳಿದುಬಂತು. ಪ್ರಾಥಮಿಕವಾಗಿ, ಕಾರಿನಡಿ ಸಿಲುಕಿ ರಸ್ತೆಯಲ್ಲಿ ಎಳೆದೊಯ್ದ ಕಾರಣ ಅವರು ಕೊಲೆಯಾಗಿದ್ದಾರೆ ಎಂದೂ ಅವರು ಹೇಳಿದರು.
ಕಾಂಜಾವಾಲಾ ಪ್ರಕರಣ
20 ವರ್ಷದ ಮಹಿಳೆಯೊಬ್ಬಳು ತನ್ನ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಳು ಮತ್ತು ಆಕೆಯ ದೇಹವನ್ನು ನಾಲ್ಕು ಚಕ್ರಗಳ ಕೆಳಗೆ 12 ಕಿಲೋಮೀಟರ್ ಎಳೆದುಕೊಂಡು ಹೋಗಲಾಯಿತು ಮತ್ತು ಜನವರಿ 1 ರಂದು ದೆಹಲಿಯ ಕಾಂಜಾವಾಲಾ ಪ್ರದೇಶದಲ್ಲಿ ರಸ್ತೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.