ಪರೀಕ್ಷೆಯಲ್ಲಿ ಫೇಲ್ 9 ವಿದ್ಯಾರ್ಥಿಗಳು ಆತ್ಮಹತ್ಯೆ!
ಹೈದರಾಬಾದ್: ಆಂಧ್ರಪ್ರದೇಶದ ಪರೀಕ್ಷಾ ಮಂಡಳಿ (Andhra Pradesh Board of Intermediate Examination) ಬುಧವಾರ 11 ಮತ್ತು 12 ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ನಂತರ ಒಂಭತ್ತು ವಿದ್ಯಾರ್ಥಿಗಳು (Students) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ಗೋಪಾಲಪುರಂ ಗ್ರಾಮದ 17 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ ಹೆಚ್ಚಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದ. ಇದರಿಂದ ಮನನೊಂದು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಲ್ಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿನಾಧಪುರಂನ 16 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲವು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಖಪಟ್ಟಣಂನ (Vishakapattanam) ಕಂಚರಪಾಲೆಂನ 18 ವರ್ಷದ ಯುವಕ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಆತ ದ್ವಿತೀಯ ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದ ಎಂದು ತಿಳಿದು ಬಂದಿದೆ. ಚಿತ್ತೂರು ಜಿಲ್ಲೆಯ ಇಬ್ಬರು 17 ವರ್ಷದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒರ್ವ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಬಾಲಕನೊಬ್ಬ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮತ್ತೊಬ್ಬ 17 ವರ್ಷದ ವಿದ್ಯಾರ್ಥಿ ಅನಕಾಪಲ್ಲಿಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಟರ್ ಮೀಡಿಯೇಟ್ ಮೊದಲ ವರ್ಷದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ ರಾಜ್ಯದಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 11ನೇ ತರಗತಿಗೆ 61% ಫಲಿತಾಂಶ ಬಂದಿದ್ದರೆ, 12ನೇ ತರಗತಿಗೆ 72% ಫಲಿತಾಂಶ ಬಂದಿತ್ತು.
ಭಾರತದ (India) ಪ್ರೀಮಿಯರ್ ಕಾಲೇಜುಗಳಲ್ಲಿ ಆತ್ಮಹತ್ಯೆಗಳ ಸರಣಿಯ ಆಘಾತಕಾರಿ ಬೆಳವಣಿಗೆಯ ನಡುವೆ ಈ ಸಾವುಗಳು ಪೋಷಕರನ್ನು ಕಂಗೆಡಿಸಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Indian Institute of Technology) ವಿವಿಧ ಕ್ಯಾಂಪಸ್ಗಳಲ್ಲಿ ಈ ವರ್ಷ ನಾಲ್ಕು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud) ಅವರು ಫೆಬ್ರವರಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಾವಿಗೀಡಾದ ವಿದ್ಯಾರ್ಥಿಗಳ ದುಃಖಿತ ಕುಟುಂಬ ಸದಸ್ಯರ ಬಗ್ಗೆ ಮರುಕವಿದೆ ಎಂದು ಹೇಳಿದ್ದರು. ನಮ್ಮ ವ್ಯವಸ್ಥೆಯಲ್ಲಿ ಎಲ್ಲಿ ತಪ್ಪಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.