- ಕ್ರೀಡೆ
- 4:26 ಅಪರಾಹ್ನ
- ಮಾರ್ಚ್ 25, 2023
ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್ 360ಗೆ ಯುವರಾಜ್ ಸಿಂಗ್ ಬೆಂಬಲ

ಮುಂಬೈ: ಕಳೆದ ವರ್ಷ ಟಿ20 ಕ್ರಿಕೆಟ್ನಲ್ಲಿ ಧೂಳೆಬ್ಬಿಸಿದ್ದ ಟೀಂ ಇಂಡಿಯಾ (Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ನಲ್ಲಿ ಗೋಲ್ಡನ್ ಡಕ್ ಆಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮ್ಯಾನ್ ಸೂರ್ಯಕುಮಾರ್ ಅವರು 2022ರ ಋತುವಿನಲ್ಲಿ 1,164 ರನ್ ಕಲೆಹಾಕಿದ್ದರು. 2 ಶತಕ ಮತ್ತು 9 ಅರ್ಧಶತಕ ಗಳಿಸಿದ್ದರು. ಅಲ್ಲದೇ ಐಸಿಸಿ ರ್ಯಾಂಕಿಂಗ್ನಲ್ಲಿ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮ್ ರಿಜ್ವಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಈ ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಸ್ಫೋಟಕ ಶತಕ ಸಿಡಿಸಿ ಟೀಂ ಇಂಡಿಯಾಕ್ಕೆ ಸರಣಿ ಕಿರೀಟ ತಂಡುಕೊಟ್ಟಿದ್ದರು. ಆದರೆ ಏಕದಿನ ಕ್ರಿಕೆಟ್ನಲ್ಲಿ ಫಾರ್ಮ್ಗೆ ಮರಳಲು ಹೆಣಗಾಡುತ್ತಿರುವ ಸೂರ್ಯಕುಮಾರ್ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಸೂರ್ಯನ ಬೆಂಬಲಕ್ಕೆ ನಿಂತಿದ್ದಾರೆ.
Every sports person goes thru ups & downs in their career! We’ve all experienced it at sum point. I believe @surya_14kumar is a key player for India 🇮🇳 & will play an imp role in the #WorldCup if given the opportunities. Let’s back our players coz our Surya 🌞 will rise again 💯
— Yuvraj Singh (@YUVSTRONG12) March 24, 2023
ಈ ಕುರಿತು ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲಿ ಏರಿಳಿತಗಳು ಸಹಜ. ನಾವು ಕೂಡ ಒಂದು ಹಂತದಲ್ಲಿ ಅದನ್ನ ಅನುಭವಿಸಿದ್ದೇವೆ. ವಿಶ್ವಕಪ್ ಟೂರ್ನಿಯಲ್ಲಿ (ODI WorldCup 2023) ಸೂರ್ಯಕುಮಾರ್ ಯಾದವ್ಗೆ ಆಡುವ ಒಂದೇ ಒಂದು ಅವಕಾಶ ಸಿಕ್ಕರೆ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾನು ನಂಬುತ್ತೇನೆ. ಭಾರತ ತಂಡದಲ್ಲಿ ಸೂರ್ಯ ಮತ್ತೇ ಉದಯಿಸುತ್ತದೆʼಎಂದು ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟ್ಸ್ಮ್ಯಾನ್ ಆಗಿರುವ ಸೂರ್ಯಕುಮಾರ್ ಯಾದವ್, 2022ರ ಆವೃತ್ತಿಯಲ್ಲಿ ಗಾಯಗೊಂಡು ಕೊನೆಯ ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ಅದಕ್ಕೂ ಮುನ್ನ ಆಡಿದ್ದ 8 ಪಂದ್ಯಗಳಲ್ಲಿ 150 ಸ್ಟ್ರೆಕ್ ರೇಟ್ನಲ್ಲಿ ಬ್ಯಾಟ್ ಬೀಸಿ 303 ರನ್ ಸಿಡಿಸಿದ್ದರು.
16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.