
Karnataka Assembly Elections: ವಿಧಾನಸಭಾ 2023ರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಮಾರಾಟ, ಸ್ವೀಕಾರದಲ್ಲಿ ದಾಖಲೆ ಮಾಡಿದೆ. ಜೊತೆಗೆ ಠೇವಣಿಯಾಗಿ 21.19 ಕೋಟಿ ಮೊತ್ತ ಸಂಗ್ರಹ ಮಾಡುವ ಮೂಲಕವೂ ರಾಜಕೀಯ ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಕೆಪಿಸಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುವ ಉದ್ದೇಶದಿಂದ ಅಕಾಂಕ್ಷಿ ಅಭ್ಯರ್ಥಿಗಳಿಂದ ಹಣವನ್ನು ಸಂಗ್ರಹ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಒಟ್ಟು 1311 ಮಂದಿ ಆಕಾಂಕ್ಷೆಗಳು ಟಿಕೆಟ್ ಗಾಗಿ ಅರ್ಜಿ ಪಡೆದಿದ್ದರು. ಆ ಪೈಕಿ 1230 ಅರ್ಜಿಗಳು ಸ್ವೀಕಾರವಾಗಿವೆ. ಇದರಲ್ಲಿ ಸಾಮಾನ್ಯ ವರ್ಗದ 889 ಅರ್ಜಿಗಳು, ಎಸ್ ಟಿ, ಎಸ್ ಸಿ ವರ್ಗದಿಂದ 341 ಅರ್ಜಿಗಳನ್ನು ಭರ್ತಿ ಮಾಡಿ, ಡಿಡಿ ಪಡೆದು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 1 ರಿಂದ 15 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಒಲವು ತೋರಿಸಿದ ಹಿನ್ನೆಲೆಯಲ್ಲಿ ನವೆಂಬರ್ 21 ರವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಯಿತು. ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಸಲ್ಲಿಸುವವರಿಗೆ ಇನ್ನಷ್ಟು ಕಾಲಾವಕಾಶ ನೀಡಲಾಗಿದೆ ಎಂಬ ಮಾಹಿಯಿ ಲಭ್ಯವಾಗಿದೆ.
ಸಾಮಾನ್ಯ ಆಕಾಂಕ್ಷಿಗಳಿಗೆ 2 ಲಕ್ಷ- ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 1 ಲಕ್ಷ ಮೊತ್ತ:
ಸಾಮಾನ್ಯ ವರ್ಗದ ಆಕಾಂಕ್ಷಿ ಅಭ್ಯರ್ಥಿಗಳು ಅರ್ಜಿ ಮೊತ್ತ 5 ಸಾವಿರದ ಜೊತೆಗೆ ಎರಡು ಲಕ್ಷದ ಡಿಡಿ ಸಲ್ಲಿಕೆ ಮಾಡಬೇಕು. ಅದೇ ರೀತಿಯಲ್ಲಿ ಎಸ್ ಸಿ, ಎಸ್ ಟಿ ಸಮುದಾಯದ ಆಕಾಂಕ್ಷಿಗಳಿಗೆ ಒಂದು ಲಕ್ಷ ರೂಪಾಯಿ ನಿಗದಿ ಪಡಿಸಲಾಗಿತ್ತು. ಈ ಮೂಲಕ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಂದ 17.78 ಕೋಟಿ ಹಾಗೂ ಎಸ್ ಸಿ, ಎಸ್ ಟಿ ಆಕಾಂಕ್ಷಿಗಳಿಂದ 3.41 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ಕೆಪಿಸಿಸಿ ಮೂಲಗಳು ದೃಢಪಡಿಸಿವೆ.
ಕಟ್ಟಡ ನಿರ್ಮಾಣಕ್ಕೆ ಹಣ ಬಳಕೆ:
ಅರ್ಜಿ ಸಲ್ಲಿಕೆ ಮತ್ತು ಸ್ವೀಕಾರದಿಂದ ಸಂಗ್ರಹವಾಗಿರುವ ಮೊತ್ತವನ್ನು ಕೆಪಿಸಿಸಿ ನೂತನ ಕಟ್ಟಡ ಪೂರ್ಣಗೊಳಿಸಲು ಬಳಕೆ ಮಾಡುವ ಸಾಧ್ಯತೆ ಇದೆ. ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಣಕಾಸು ಕೊರತೆ ಕಾರಣದಿಂದ ಕಾಮಗಾರಿ ಕುಟುಂತ್ತಾ ಸಾಗುತ್ತಿತ್ತು. ಇದೀಗ ಈ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.
WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!